ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಗುವಾಹಟಿ ಟೆಸ್ಟ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ತಂಡಕ್ಕೆ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಗೆಲ್ಲಲು ಬೇಕಿರುವ ಬೃಹತ್ ಮೊತ್ತದ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಮೊದಲು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವತ್ತ ಗಮನಹರಿಸಬೇಕು ಎಂದು ಅವರು ತಂಡಕ್ಕೆ ಕಿವಿಮಾತು ಹೇಳಿದ್ದಾರೆ.
ಬೃಹತ್ ಗುರಿ, ಆರಂಭಿಕ ಆಘಾತ
ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 260/5ಕ್ಕೆ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ ಗೆಲ್ಲಲು ಬರೋಬ್ಬರಿ 549 ರನ್ಗಳ ಕಠಿಣ ಗುರಿಯನ್ನು ನೀಡಿದೆ. ಈ ಗುರಿ ಬೆನ್ನಟ್ಟಿದ ಭಾರತದ ಆರಂಭವೇ ಆಘಾತಕಾರಿಯಾಗಿತ್ತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಬೇಗನೆ ವಿಕೆಟ್ ಒಪ್ಪಿಸಿದ್ದು, 4ನೇ ದಿನದ ಆಟದ ಮುಕ್ತಾಯಕ್ಕೆ ಭಾರತ 27 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಬೃಹತ್ ಗುರಿ, ಆರಂಭಿಕ ಆಘಾತ
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಪೂಜಾರ, “ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ, ಮೊದಲು ಚೆನ್ನಾಗಿ ಬ್ಯಾಟಿಂಗ್ ಮಾಡುವ ಬಗ್ಗೆ ಯೋಚಿಸಬೇಕು. ಗೆಲುವು ಕೊನೆಯಲ್ಲಿ ಸಿಗುವ ಫಲಿತಾಂಶವಷ್ಟೇ. ನೀವು ಯಾವಾಗ ಸ್ಕೋರ್ ಬೋರ್ಡ್ ಮೇಲಿರುವ 400 ಅಥವಾ 500 ಪ್ಲಸ್ ರನ್ಗಳನ್ನು ನೋಡುತ್ತೀರೋ, ಆಗ ನಿಮ್ಮ ಗಮನ ಬ್ಯಾಟಿಂಗ್ ಮೇಲಿರುವುದಿಲ್ಲ; ಬದಲಿಗೆ ಫಲಿತಾಂಶದ ಕಡೆಗೆ ಹೋಗುತ್ತದೆ. ಇಂತಹ ಮನಸ್ಥಿತಿಯಲ್ಲಿ ಎಂದಿಗೂ ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ,” ಎಂದು ವಿಶ್ಲೇಷಿಸಿದ್ದಾರೆ.
ಸಣ್ಣ ಜೊತೆಯಾಟಕ್ಕೆ ಒತ್ತು ನೀಡಿ
ತಮ್ಮ ರಕ್ಷಣಾತ್ಮಕ ಆಟಕ್ಕೆ ಹೆಸರಾಗಿದ್ದ ಪೂಜಾರ, “ಸ್ಕೋರ್ ಕಾರ್ಡ್ ಅನ್ನು ಮನಸ್ಸಿನಿಂದ ತೆಗೆದುಹಾಕಿ. ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಾಗ ಕೇವಲ ಆಟದ ಕಡೆಗಷ್ಟೇ ಗಮನವಿರಲಿ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಎಸೆತವೂ ಮುಖ್ಯ. ಸಣ್ಣ ಸಣ್ಣ ಜೊತೆಯಾಟಗಳನ್ನು ಕಟ್ಟಲು ಪ್ರಯತ್ನಿಸಿ. ನಂತರವಷ್ಟೇ ಫಲಿತಾಂಶದ ಬಗ್ಗೆ ಯೋಚಿಸಿ,” ಎಂದು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಸತತ ಇನ್ನಿಂಗ್ಸ್ಗಳಲ್ಲಿ 300 ರನ್ ದಾಟಲು ಪರದಾಡುತ್ತಿರುವ ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಪೂಜಾರ ಅವರ ಈ ಸಲಹೆ ತಂಡಕ್ಕೆ ಆತ್ಮವಿಶ್ವಾಸ ತುಂಬಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಕಾರು ಅಪಘಾತದಲ್ಲಿ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು



















