ಬೆಂಗಳೂರು: ನಕಲಿ ಅಂಕಪಟ್ಟಿ ಜಾಲ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗಿ ಬಿಟ್ಟಿದೆ. ಹಲವರು ಸರ್ಕಾರವನ್ನೇ ಯಾಮಾರಿಸಿ ಕೆಲಸ ಗಿಟ್ಟಿಸಿಕೊಂಡಿರುವ ಘಟನೆಗಳು ಕೂಡ ನಡೆಯುತ್ತಿರುತ್ತವೆ. ಈ ಮಧ್ಯೆ ಈ ನಕಲಿ ಅಂಕಪಟ್ಟಿ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಮೂವರು ಸರ್ಕಾರಿ ನೌಕರರು ಸೇರಿದಂತೆ ಬರೋಬ್ಬರಿ 48 ಜನರನ್ನು ಬಂಧಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್ ಲಾಗ್ ಹುದ್ದೆಗಾಗಿ ನಕಲಿ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಶಾಮೀಲಾಗಿದ್ದ 11 ಜನ ಮಧ್ಯವರ್ತಿಗಳು ಹಾಗೂ 37 ಅಭ್ಯರ್ಥಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಶಾಮೀಲಾಗಿರುವ 14 ಜನ ಅಭ್ಯರ್ಥಿಗಳು ಹಾಗೂ ದಂಧೆಯ ಕಿಂಗ್ ಪಿನ್ ಗಳು ತಲೆಮರೆಸಿಕೊಂಡಿದ್ದು, ಬಲೆ ಬೀಸಲಾಗಿದೆ.
ಆರೋಪಿಗಳಾದ ಕಲಬುರಗಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರಾಂಶುಪಾಲ ಆನಂದ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಎಫ್ ಡಿಎ ಕೃಷ್ಣ ಗುರುನಾಥ್ ರಾಥೊಡ್, ಜಲಸಂಪನ್ಮೂಲ ಇಲಾಖೆ ಎಫ್ ಡಿಎ ಹಾಸನದ ಗಂಗೂರ್ ಪ್ರದೀಪ್, ಮಧ್ಯವರ್ತಿಗಳಾಗಿರುವ ಹಾಸನದ ಟಿ.ರವಿ, ಮಳವಳ್ಳಿ ಪ್ರದೀಪ್, ಜೇವರ್ಗಿ ಮೂಲದ ನಿಂಗಪ್ಪ ನಡುವಿನಮನಿ, ಸಿಂಧಗಿಯ ಮಲ್ಲಿಕಾರ್ಜುನ ಸೋಂಪುರ್, ಕಲಬುರಗಿಯ ಮುಸ್ತಾಫ ಸೇರಿದಂತೆ 37 ಅಭ್ಯರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ ಎರಡು ಕಾರು, 17 ಮೊಬೈಲ್ ಹಾರ್ಡ್ಡಿಸ್ಕ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ಆನಂದ್, ಪ್ರದೀಪ್ ಹಾಗೂ ಕೃಷ್ಣಗುರುನಾಥ್ ಸೇರಿಕೊಂಡು ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಂದ ನಾಲ್ಕರಿಂದ ಐದು ಲಕ್ಷ ರೂ. ಪಡೆದು ನಕಲಿ ಅಂಕಪಟ್ಟಿಯೊಂದಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಾರ ಎನ್ನಲಾಗಿದೆ. ಇನ್ನುಳಿದ ಮಧ್ಯವರ್ತಿ ಆರೋಪಿಗಳು ಕಂಪ್ಯೂಟರ್ ಬ್ರೌಸಿಂಗ್ ಸೆಂಟರ್ ಗಳಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಹಣ ಪಡೆದಿದ್ದರು. ಅಲ್ಲದೇ, ಬಂಗಾಳದ ಕಾಲೇಜೊಂದರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ನೀಡಿರುವುದು ಕೂಡ ಬೆಳಕಿಗೆ ಬಂದಿದೆ. ಪ್ರಮುಖ ಕಿಂಗ್ಪಿನ್ ಬಂದೇ ನವಾಜ್ ಎಂಬುವವನು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳು ಪಿಯುಸಿ, ಪದವಿ, ಎಸ್ಸೆಸ್ಸೆಲ್ಸಿ ಸೇರಿದಂತೆ ಎಲ್ಲಾ ಕೋರ್ಸ್ ಗಳ ಅಂಕಪಟ್ಟಿಗಳಿಗೂ 4ರಿಂದ 5 ಲಕ್ಷ ರೂ. ನಿಗದಿ ಮಾಡಿದ್ದರು. ಪ್ರತ್ಯೇಕ ತಂಡಗಳಾಗಿ ತಮಗೆ ಸಂಪರ್ಕಕ್ಕೆ ಪಡೆದ ಅಭ್ಯರ್ಥಿಗಳಿಂದ ಹಣ ಪಡೆದು ಪಿಯು ಬೋರ್ಡ್ ನಿಂದ ವಿತರಿಸಲಾಗುವ ಅಂಕಪಟ್ಟಿಗಳ ಮಾದರಿಯಲ್ಲೇ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದರು ಎನ್ನಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿಯಿದ್ದ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ 182 ಪರಿಶಿಷ್ಟ ಜಾತಿ ಬ್ಯಾಕ್ ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 1:3ರ ಅನುಪಾತದಲ್ಲಿ 546 ಅಭ್ಯರ್ಥಿಗಳಿಗೆ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸುವಂತೆ ಇಲಾಖೆ ಸೂಚಿಸಿತ್ತು. ಸಲ್ಲಿಕೆಯಾಗಿದ್ದ 546 ಅಂಕಪಟ್ಟಿಗಳ ನೈಜತೆ ಪರಿಶೀಲನೆಗೆ ಶಿಕ್ಷಣ ಇಲಾಖೆ ಹಾಗೂ ಇತರೆ ಸಕ್ಷಮ ಪ್ರಾಧಿಕಾರಗಳಿಗೆ ಕಳುಹಿಸಲಾಗಿತ್ತು. ಪರಿಶೀಲನೆ ಸಂದರ್ಭದಲ್ಲಿ 24 ಪಿಯುಸಿ ಅಂಕಪಟ್ಟಿಗಳು, ಎಂಟು ಎನ್ ಐ ಓಸ್ ಅಂಕಪಟ್ಟಿ, 32 ಸಿಬಿಎಸ್ ಇ ಅಂಕಪಟ್ಟಿಗಳು ನಕಲಿ ಎನ್ನುವುದು ಖಚಿತವಾಗಿತ್ತು. ಹೀಗಾಗಿ 62 ಅಭ್ಯರ್ಥಿಗಳ ವಿರುದ್ಧ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ತನಿಖೆಯ ಜವಾಬ್ದಾರಿಯನ್ನು ಸಿಸಿಬಿ ಹೊತ್ತುಕೊಂಡಿತ್ತು.