ಶ್ರೀನಗರ : ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ್ದ ಸ್ಫೋಟ ಕೇವಲ ಆಕಸ್ಮಿಕ ಘಟನೆ. ಸಂಗ್ರಹಿಸಿದ್ದ ಸ್ಫೋಟಕದಿಂದ ಮಾದರಿಯನ್ನ ಹೊರ ತೆಗೆಯುವಾಗ ಸ್ಫೋಟ ಸಂಭವಿಸಿದೆ. ಇದರ ಹಿಂದೆ ಯಾವುದೇ ಭಯೋತ್ಪಾದನೆ ಪಿತೂರಿ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ಭಯೋತ್ಪಾದಕ ಪಿತೂರಿ ಅಲ್ಲ ;
ನೌಗಮ್ ಠಾಣೆಯಲ್ಲಿ ಉಂಟಾದ ಸ್ಫೋಟದ ಕುರಿತು ಗೃಹ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಆಕಸ್ಮಿಕ ಘಟನೆ ಎಂದು ಹೇಳಿದೆ. ನವೆಂಬರ್ 14ರ ರಾತ್ರಿ 11:20ಕ್ಕೆ ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯೊಳಗೆ ಆಕಸ್ಮಿಕ ಘಟನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇತ್ತೀಚೆಗೆ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ್ದ ಪೊಲೀಸರು ಫರಿದಾಬಾದ್ನಲ್ಲಿ ಕಾರ್ಯಾಚರಣೆ ವೇಳೆ ಬೃಹತ್ ಪ್ರಮಾಣದ ಸ್ಫೋಟಕಗಳನ್ನ ವಶಪಡಿಸಿಕೊಂಡಿದ್ದರು. ಇದನ್ನ ಪೊಲೀಸ್ ಠಾಣೆಯ ತೆರೆದ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಅಲ್ಲದೇ ವಶಪಡಿಸಿಕೊಳ್ಳಲಾದ ರಾಸಾಯನಿಕ ಮತ್ತು ಸ್ಫೋಟಕಗಳ ಮಾದರಿಯನ್ನ ವಿಧಿವಿಜ್ಞಾನ ಮತ್ತು ರಾಸಾಯನಿಕ ಪರೀಕ್ಷೆ ಕಳಿಸಲಾಗುತ್ತಿತ್ತು.
ಈ ಪ್ರಕ್ರಿಯೆ ಕಳೆದ 2 ದಿನಗಳಿಂದ ನಡೆಯುತ್ತಿತ್ತು. ತಜ್ಞರು ಎಚ್ಚರಿಕೆಯಿಂದಲೇ ನಿರ್ವಹಿಸುತ್ತಿದ್ದರು. ಆದಾಗ್ಯೂ ಪ್ರಕ್ರಿಯೆ ಸಮಯದಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿದೆ. ಇದು ನಿಜಕ್ಕೂ ದುರಾದೃಷ್ಟಕರ. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಕಂದಾಯ ಅಧಿಕಾರಿಗಳು ಹಾಗೂ ಮೂವರು ನಾಗರಿಕರೂ ಇದ್ದಾರೆ. ಗಾಯಾಳುಗಳನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಪೊಲೀಸ್ ಠಾಣೆಯ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಠಾಣೆಯ ಸುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ. ಅಪಘಾತ ಪ್ರಕರಣವನ್ನ ತನಿಖೆ ಮಾಡಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಊಹಾಪೋಹಗಳು ಅನಗತ್ಯ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಕೋಲ್ಕತ್ತಾದ ಎಜ್ರಾ ಸ್ಟ್ರೀಟ್ ಬಳಿ ಭಾರೀ ಅಗ್ನಿ ದುರಂತ | 20 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡು



















