ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ವರಸೆ ಬದಲಿಸಿದ್ದ ಇಬ್ಬರು ಶಾಸಕರನ್ನು ಬಿಜೆಪಿ ಅಳೆದು ತೂಗಿ ಕಡೆಗೂ ಅನರ್ಹಗೊಳಿಸಿದೆ. ತಡವಾಗಿಯಾದ್ರೂ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ರನ್ನು ಅನರ್ಹಗೊಳಿಸಿದೆ. ಹಾಗಂತಾ ಈ ಇಬ್ಬರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪಗಳಿವೆ. ಹಾಗಂತಾ ನಿಜಕ್ಕೂ ಬಿಜೆಪಿ ಹೈಕಮಾಂಡ್ ಈ ಇಬ್ಬರು ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣವಾದ ಅಂಶಗಳೇನು ಅನ್ನೋದನ್ನ ಇವತ್ತು ನಿಮ್ಮ ನ್ಯೂಸ್ ಬೀಟ್ ತೆರೆದಿಡ್ತಿದೆ.
ಪ್ರಮುಖವಾಗಿ, 2023ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಮತದಾನದಿಂದಲೇ ದೂರ ಉಳಿದಿದ್ರು, ಬೆಂಗಳೂರಲ್ಲೇ ಇದ್ರೂ ಇಬ್ರೂ ಮತದಾನಕ್ಕೆ ಗೈರಾಗಿದ್ರು. ಪಕ್ಷದ ವಿಪ್ ಜಾರಿಯಲ್ಲಿದ್ರೂ ಉಲ್ಲಂಘಿಸಿ, ಮತದಾನದಿಂದ ದೂರ ಉಳಿದಿದ್ರು. ಈ ವೇಳೆ ಉಭಯ ನಾಯಕರಿಗೆ ಪಕ್ಷದ ವೇದಿಕೆಯಲ್ಲೇ ಅಸಮಾಧಾನವಿದ್ರೆ ಚರ್ಚಿಸುವಂತೆಯೂ ಸೂಚಿಸಲಾಗಿತ್ತು. ಆದ್ರೆ ಇದಕ್ಕೂ ಸೊಪ್ಪು ಹಾಕದ ಇಬ್ಬರು ನಾಯಕರ ಮನವೊಲಿಕೆಗೆ ಕೆಲ ಹಿರಿಯ ಮುಖಂಡರು ಮನವೊಲಿಕೆ ಕಾರ್ಯ ಮಾಡಿದ್ರೂ ಯಾವುದೇ ಪ್ರಯೋಜನವಾಗಿರ್ಲಿಲ್ಲ. ಈ ಬೆಳವಣಿಗೆಗಳಿಂದಲೇ ಪಕ್ಷದ ಹೈಕಮಾಂಡ್ ಕೂಡಾ ಈ ನಾಯಕರ ಮೇಲೆ ಕಣ್ಣು ಕೆಂಪಗಾಗಿಸಿತ್ತು.
ಇದರ ನಡುವೆ ಪಕ್ಷದಿಂದ ಬೇಕಿದ್ರೆ ನಮ್ಮನ್ನ ಉಚ್ಛಾಟನೆ ಮಾಡ್ಲಿ ನಾವು ಮಾತ್ರ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡೋದಿಲ್ಲ ಅಂದಿದ್ರು. ಇದಕ್ಕೆ ಸ್ಪಷ್ಟನೆ ಕೋರಿ ಎರಡು ಬಾರಿ ನೋಟಿಸ್ ನೀಡಿದ್ರೂ ನಾಯಕರು ಮಾತ್ರ ಡೋಂಟ್ ಕೇರ್ ಅಂದಿದ್ರು. ಬಳಿಕ ಎರಡನೇ ಪ್ರಮುಖ ಕಾರಣವೆಂದ್ರೆ ಲೋಕಸಭಾ ಚುನಾವಣೆ ವೇಳೆ ಪಕ್ಷದ ವೇದಿಕೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ರೂ ಈ ಇಬ್ಬರೂ ಪ್ರಚಾರ ಸೇರಿ ಬಹುತೇಕ ಎಲ್ಲ ಚಟುವಟಿಕೆಗಳಿಂದ ದೂರವೇ ಉಳಿದಿದ್ರು. ಈ ಎಲ್ಲ ಕಾರಣಗಳಿಂದಾಗಿಯೇ ಕಡೆಗೂ ಪಕ್ಷದ ವರಿಷ್ಠರು ತಡವಾಗಿಯಾದ್ರೂ ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ.