ಲಕ್ನೋ: ಮೀರತ್ ಕೊಲೆ ಪ್ರಕರಣವನ್ನು ನೆನಪಿಸುವಂಥ ಮತ್ತೊಂದು ಭೀಕರ ಹತ್ಯೆ(Murder News) ಕೇಸು ಉತ್ತರಪ್ರದೇಶದಲ್ಲೇ ಬೆಳಕಿಗೆ ಬಂದಿದೆ. ನಿವೃತ್ತ ಯೋಧನನ್ನು ಕೊಂದು, ದೇಹವನ್ನು 6 ಭಾಗಗಳಾಗಿ ಕತ್ತರಿಸಿ, ನದಿಯ ತಟದುದ್ದಕ್ಕೂ ವಿವಿಧ ಭಾಗಗಳಲ್ಲಿ ಎಸೆದ ಆರೋಪದ ಮೇರೆಗೆ ಯೋಧನ ಪತ್ನಿ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಮಹಿಳೆಯನ್ನು ಮಾಯಾ ದೇವಿ ಎಂದು ಗುರುತಿಸಲಾಗಿದೆ. ಈಕೆಗೆ 50 ವರ್ಷ ವಯಸ್ಸು. ಈಕೆಯ ಪತಿ ದೇವೇಂದ್ರ ಕುಮಾರ್ ಭಾರತೀಯ ಸೇನೆಯ ಗಡಿ ರಸ್ತೆ ಸಂಸ್ಥೆ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಬಹಾದೂರ್ ಪುರ ನಿವಾಸಿ ಮಾಯಾದೇವಿಗೆ ಅನಿಲ್ ಯಾದವ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಅನಿಲ್ ಜೊತೆಗೆ ಸೇರಿ ತನ್ನ ಪತಿ ದೇವೇಂದ್ರ ಕುಮಾರ್ ನನ್ನು ಕೊಲ್ಲಲು ಮಾಯಾದೇವಿ ಸಂಚು ರೂಪಿಸಿದ್ದಳು. ಈ ಕೊಲೆ ಕೃತ್ಯಕ್ಕೆ ಅನಿಲ್ ಸ್ನೇಹಿತರಾದ ಸತೀಶ್ ಯಾದವ್ ಮತ್ತು ಚಾಲಕ ಮಿಥಿಲೇಶ್ ನೆರವಾಗಿದ್ದರು.
ಮೇ 10ರಂದು ಖರೀದ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ದೇಹದ ಭಾಗ ಪತ್ತೆಯಾಗಿತ್ತು. ಆರಂಭದಲ್ಲಿ ಕತ್ತರಿಸಿದ ಕೈ ಮತ್ತು ಕಾಲು ಸಿಕ್ಕಿತ್ತು. 2 ದಿನಗಳ ನಂತರ ಬಾವಿಯೊಂದರಲ್ಲಿ ಮುಂಡ ಪತ್ತೆಯಾಗಿತ್ತು. ಮೃತನ ತಲೆ ಇನ್ನೂ ಸಿಕ್ಕಿಲ್ಲ. ಘಘಾರಾ ನದಿಯಲ್ಲಿ ತಲೆಗಾಗಿ ಡೈವರ್ ಗಳು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 10ರಂದು ಮಾಯಾ ದೇವಿ ಪೊಲೀಸ್ ಠಾಣೆಗೆ ಬಂದು ತಮ್ಮ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ಬಿಹಾರದ ಬಕ್ಸಾರ್ ರೈಲು ನಿಲ್ದಾಣದಿಂದ ಮಗಳನ್ನು ಕರೆತರಲೆಂದು ಹೋಗಿದ್ದ ಪತಿ, ವಾಪಸ್ ಬಂದಿಲ್ಲ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಗ್ರಾಮವೊಂದರಲ್ಲಿ ಸಿಕ್ಕ ಮುಂಡಕ್ಕೂ ದೇವೇಂದ್ರ ಕುಮಾರ್ ಅವರಿಗೂ ಹೋಲಿಕೆ ಇದ್ದ ಕಾರಣ, ಪೊಲೀಸರಿಗೆ ಅನುಮಾನ ಮೂಡಿತ್ತು. ಕೂಡಲೇ ಮಾಯಾ ದೇವಿ ಮತ್ತು ಸಹ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ದೇವೇಂದ್ರ ಅವರ ತಲೆಯನ್ನು ಘಾಘರ ನದಿಯಲ್ಲಿ ಬಿಸಾಕಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಅದರಂತೆ ನದಿಯಲ್ಲಿ ಶಿರಕ್ಕಾಗಿ ಹುಡುಕಾಟ ಆರಂಭಿಸಲಾಗಿದೆ.
ಇದನ್ನೂ ಓದಿ: ಕೇರಳ ಮೂಲದ ವ್ಯಕ್ತಿ ಕೊಲೆಮಾಡಿದ್ದ ಐವರ ಬಂಧನ
ಅನಿಲ್ ಯಾದವ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮೂಲಕ ಬಂಧಿಸಿದ್ದಾರೆ. ಈ ವೇಳೆ ಅನಿಲ್ ಕಾಲಿಗೆ ಗುಂಡು ತಗುಲಿದೆ. ಎಲ್ಲ 4 ಆರೋಪಿಗಳೂ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.