ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಮತ್ತಷ್ಟು ಕರಾಳ ಮುಖ ಬಯಲಾಗುತ್ತಿದೆ. ವಿಚಾರಣೆ ವೇಳೆ ಗ್ಯಾಂಗ್ ನ ಮತ್ತಷ್ಟು ಕ್ರೌರ್ಯ ಅನಾವರಣವಾಗುತ್ತಿದೆ.
ಸಾಕಷ್ಟು ಚಿತ್ರಹಿಂಸೆ ಕೊಟ್ಟು ರೇಣುಕಾಸ್ವಾಮಿಯನ್ನು ಪಾಪಿಗಳು ಕೊಲೆ ಮಾಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬರುತ್ತಿದೆ. ರೇಣುಕಾಸ್ವಾಮಿ ಮೇಲೆ ಕಬ್ಬಿಣದ ರಾಡ್, ರಿಪೀಸ್, ಲಾಠಿಯಿಂದ ಹಲ್ಲೆ ಮಾಡಿದ್ದ ದರ್ಶನ್ ಗ್ಯಾಂಗ್, ಅವರ ತಲೆಯನ್ನು ಲಾರಿಗೆ ಜಜ್ಜಿತ್ತು. ಹೀಗಾಗಿ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಎಂದು ತಿಳಿದು ಬಂದಿದೆ.
ಪ್ರಜ್ಞೆ ತಪ್ಪಿದಾಗ ಕರೆಂಟ್ ಶಾಕ್ ನೀಡಿದ್ದಾರೆ. ಆತನ ಕೈ-ಕಿವಿ-ಹೊಟ್ಟೆ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಟಾರ್ಚರ್ ಕೊಟ್ಟಿದ್ದಾರೆ. ಪ್ರಜ್ಞೆ ಬರಿಸಿ ಮತ್ತೆ ಹೊಡೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ. ಈ ಕುರಿತು 9ನೇ ಆರೋಪಿ ಧನರಾಜ್ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಕರೆಂಟ್ ಶಾಕ್ ಕೊಡಲು ಬಳಸುವ ಮೆಗ್ಗಾರ್ ಡಿವೈಸ್ ಅನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಪಟ್ಟಣಗೆರೆಯ ಜಯಣ್ಣ ಶೆಡ್ ನಲ್ಲಿ ಹಲವರಿಗೆ ಟಾರ್ಚರ್ ನೀಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಫೈನಾನ್ಸ್ ಸರಿಯಾಗಿ ಕಟ್ಟದವರನ್ನು ಇಲ್ಲಿ ಕೂಡಿ ಹಾಕಿ ಟಾರ್ಚರ್ ನೀಡಲಾಗುತ್ತಿತ್ತು. ವಿನಯ್ ಕೃತ್ಯಗಳಿಗೆ ಧನರಾಜ್ ಸಾಥ್ ನೀಡುತ್ತಿದ್ದ ಎನ್ನುವುದು ಕೂಡ ಬೆಳಕಿಗೆ ಬಂದಂತಿದೆ.