ವಾಷಿಂಗ್ಟನ್ : ಕುಖ್ಯಾತ ಉದ್ಯಮಿ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯದ ಜಾಲದ ಕುರಿತು ಸಂತ್ರಸ್ತೆ ರೀನಾ ಓ ದಶಕಗಳ ಮೌನದ ಬಳಿಕ ಇದೀಗ ಬಾಯಿಬಿಟ್ಟಿದ್ದಾರೆ. ಖಾಸಗಿ ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಪ್ಸ್ಟೀನ್ ತನ್ನನ್ನು ಮಾನಸಿಕವಾಗಿ ಹೇಗೆ ಕುಗ್ಗಿಸುತ್ತಿದ್ದ ಮತ್ತು ಬೆದರಿಸುತ್ತಿದ್ದ ಎಂಬ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರೀನಾ ಓ ಅವರಿಗೆ ಕೇವಲ 21 ವರ್ಷವಾಗಿದ್ದಾಗ, 47 ವರ್ಷದ ಎಪ್ಸ್ಟೀನ್ ಅವರ ಪರಿಚಯವಾಗಿತ್ತು. ಮೊದಮೊದಲು ಹೊಗಳುತ್ತಿದ್ದ ಎಪ್ಸ್ಟೀನ್, ನಂತರದ ದಿನಗಳಲ್ಲಿ ಅವರ ದೇಹದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ ಎನ್ನಲಾಗಿದೆ. “ನನಗೆ ಆಗ ಕೇವಲ 21 ವರ್ಷ. ಆದರೆ ಎಪ್ಸ್ಟೀನ್ ಪದೇ ಪದೇ ನಾನು ತುಂಬಾ ವಯಸ್ಸಾದವಳು ಎಂದು ಟೀಕಿಸುತ್ತಿದ್ದ. ಇದು ನನ್ನ ಮೇಲೆ ದೀರ್ಘಕಾಲದ ಪರಿಣಾಮ ಬೀರಿದೆ” ಎಂದು ರೀನಾ ನೋವು ತೋಡಿಕೊಂಡಿದ್ದಾರೆ. ಬಾಲ್ಯದಲ್ಲೂ ದೌರ್ಜನ್ಯಕ್ಕೊಳಗಾಗಿದ್ದ ರೀನಾ ಅವರ ಮುಗ್ಧತೆಯನ್ನು ಎಪ್ಸ್ಟೀನ್ ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದ ಎಂದು ಅವರು ವಿವರಿಸಿದ್ದಾರೆ.
ಫ್ಲೋರಿಡಾ ಪ್ರವಾಸ, ಕರಾಳ ರಹಸ್ಯಗಳು
ತಮ್ಮ ಜೀವನದ ಅತ್ಯಂತ ಭಯಾನಕ ತಿರುವು ಫ್ಲೋರಿಡಾ ಪ್ರವಾಸದಲ್ಲಿ ಸಂಭವಿಸಿತು ಎಂದು ರೀನಾ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಎಪ್ಸ್ಟೀನ್ ಕೆಲವು ಕರಾಳ ರಹಸ್ಯಗಳನ್ನು ಹಂಚಿಕೊಂಡಿದ್ದ. ಈ ವಿಷಯವನ್ನು ರೀನಾ ಇನ್ನೊಬ್ಬ ಯುವತಿಗೆ ತಿಳಿಸಿದಾಗ, ಅವರಿಗೆ ಎಪ್ಸ್ಟೀನ್ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. “ವಾಷಿಂಗ್ಟನ್ನ ಪ್ರಭಾವಿ ವ್ಯಕ್ತಿಗಳ ಪರಿಚಯ ತನಗಿದೆ ಎಂದು ಅವನು ಹೇಳುತ್ತಿದ್ದ. ನನ್ನ ವೀಸಾ ವಿಚಾರದಲ್ಲಿ ತೊಂದರೆ ಕೊಡಬಹುದು ಅಥವಾ ನನ್ನ ಪೋಷಕರಿಗೆ ಹಾನಿ ಮಾಡಬಹುದು ಎಂಬ ಭಯ ನನ್ನನ್ನು ಕಾಡುತ್ತಿತ್ತು. ಸದಾ ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಭಾಸವಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಪ್ರಿನ್ಸ್ ಆಂಡ್ರ್ಯೂ ಬಂಧನಕ್ಕೆ ಸ್ವಾಗತ
ಬ್ರಿಟನ್ನ ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಅವರ ಬಂಧನವನ್ನು ರೀನಾ ಓ ಸ್ವಾಗತಿಸಿದ್ದಾರೆ. “ಇದು ನ್ಯಾಯದ ಹಾದಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಎಪ್ಸ್ಟೀನ್ ಶಿಕ್ಷೆ ಅನುಭವಿಸಿ ಹೊರಬಂದ ಮೇಲೂ ಆಂಡ್ರ್ಯೂ ಅವನೊಂದಿಗೆ ಏಕೆ ಸಂಪರ್ಕದಲ್ಲಿದ್ದರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಗಬೇಕಿದೆ” ಎಂದು ಅವರು ಒತ್ತಾಯಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ವ್ಯಕ್ತಿಯೊಬ್ಬರು ಕಾನೂನಿನ ಸುಳಿಗೆ ಸಿಲುಕಿರುವುದು ಇತರ ಸಂತ್ರಸ್ತರಿಗೆ ಧೈರ್ಯ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂತ್ರಸ್ತರಿಗೆ ಧೈರ್ಯದ ಮಾತು
ಅಮೆರಿಕ ಸರ್ಕಾರವು ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ರೀನಾ, ಇತರ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ. “ನೀವು ಒಂಟಿಯಲ್ಲ, ಇಡೀ ಜಗತ್ತು ನಿಮ್ಮ ಪರವಾಗಿದೆ. ಸರ್ಕಾರದ ಬೆದರಿಕೆಗಳಿಗೆ ಮಣಿಯಬೇಡಿ. ಈ ಕ್ರಿಮಿನಲ್ ಜಾಲದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಶಿಕ್ಷೆ ಅನುಭವಿಸುವವರೆಗೂ ನಮ್ಮ ಹೋರಾಟ ನಿಲ್ಲದು” ಎಂದು ಅವರು ಘೋಷಿಸಿದ್ದಾರೆ.
ಇದನ್ನೂ ಓದಿ : ತಳ್ಳುವ ಗಾಡಿಗೆ ಬೆಂಕಿ ಹಚ್ಚಿದ ದುರುಳರು



















