‘ಉಡುಪಿ : ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವ ಈ ಕಾಲಘಟ್ಟದಲ್ಲಿ ಶತಮಾನೋತ್ಸವದ ಅಂಚಿನಲ್ಲಿರುವ ಸರ್ಕಾರಿ ಶಾಲೆಯೊಂದನ್ನ ದತ್ತು ಪಡೆದು, ಉನ್ನತೀಕರಿಸಲು ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಉದ್ಯಮಿಯಾಗಿರುವ ಸತೀಶ್ ಶೆಟ್ಟಿ, ಆರ್ ಎನ್ ಎಸ್ ಸಂಸ್ಥೆ ಬೆಂಗಳೂರು, ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಹೊಳೆಯನ್ನ ದತ್ತು ಸ್ವೀಕರಿಸಿದ್ದು, ಇದರ ಭಾಗವಾಗಿ ಆಯೋಜಿಸಲಾಗಿದ್ದ ದತ್ತು ಸ್ವೀಕಾರ ಕಾರ್ಯಕ್ರಮ ಅದ್ದೂರಿಯಾಗಿ ನೆರೆವೇರಿದೆ.
ಕಾರ್ಯಕ್ರಮವನ್ನ ಆರ್ ಎನ್ ಎಸ್ ಸಂಸ್ಥೆಯ ನಿರ್ದೇಶಕರಾದ ಬಿ.ಎನ್.ಶೆಟ್ಟಿಯವರು ಉದ್ಘಾಟನೆ ಮಾಡಿದ್ದಾರೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪಕರಾದ ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್, ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಮಣ ಆಚಾರ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿದ್ದೂ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗೆ ಪೈಪೋಟಿಯನ್ನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಅರೆಹೊಳೆ ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಶಿಕ್ಷಣಾಭಿವೃದ್ಧಿ ಸಮಿತಿ ಹೆಜ್ಜೆ ಹಾಕಿದ್ದು ಇದಕ್ಕೆ ಆರ್ ಎನ್ ಎಸ್ ಸಂಸ್ಥೆ ಬೆಂಗಳೂರು ಕೈ ಜೋಡಿಸಿದೆ.

ಈಗಾಗಲೇ ಸರಿಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿದ್ದು, ಕೆಲವೇ ದಿನಗಳಲ್ಲಿ ಕಟ್ಟಡಗಳು ತಲೆಎತ್ತಲಿವೆ.ನಾಲ್ಕು ಕೊಠಡಿಗಳನ್ನ ನಿರ್ಮಿಸಿ ಎಲ್ ಕೆ ಜಿ, ಯುಕೆಜಿ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತಿದೆ. ಹಾಗೆ ಒಂದರಿಂದ ನಾಲ್ಕನೇ ತರಗತಿಯವರೆಗೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನ ಒದಗಿಸಲಾಗುತ್ತಿದೆ. ಜೊತೆಗೆ ಉಚಿತ ವಾಹನ ವ್ಯವಸ್ಥೆ, ಸುಸಜ್ಜಿತ ತರಗತಿ ಕೋಣೆ ವ್ಯವಸ್ಥೆ, ನುರಿತ ಇಂಗ್ಲೀಷ್ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ, ಪ್ರಾಜೆಕ್ಟರ್ ಅಳವಡಿಕೆ, ಸಿಸಿ ಕ್ಯಾಮರಾ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ, ಸ್ಪೋಕನ್ ಇಂಗ್ಲೀಷ್ ತರಬೇತಿ ಸೇರಿದಂತೆ ಹಲವು ಸೌಲಭ್ಯಗಳನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಹೊಳೆಯಲ್ಲಿ ನೀಡಲು ಸಕಲ ಸಿದ್ಧತೆಗಳು ನೆಡೆದಿದೆ.

ಉಚಿತ ಶಿಕ್ಷಣದಡಿ ಉತ್ತಮ ಸೌಕರ್ಯಗಳನ್ನ ನೀಡಲು ಆರ್ ಎನ್ ಎಸ್ ಸಂಸ್ಥೆ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು ಇದರ ಸದುಪಯೋಗವನ್ನ ಸ್ಥಳೀಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿದೆ.
ಇದನ್ನೂ ಓದಿ: ಪಿಯುಸಿ ಪರೀಕ್ಷೆಯಲ್ಲಿ ಕೈದಿ ಸಾಧನೆ – ಹೃದಯಸ್ಪರ್ಶಿ ಎಂದ ಅಲೋಕ್ ಕುಮಾರ್



















