ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಹೊಳೆಗೆ ಆಂಗ್ಲ ಮಾಧ್ಯಮದ ಸ್ಪರ್ಶವನ್ನು ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಹಿಂದೆ ಅರೆಹೊಳೆ ಶಾಲೆಯನ್ನು ದತ್ತು ಸ್ವೀಕರಿಸಿದ್ದ ಉದ್ಯಮಿಗಳಾದ ಶಂಕರ್ ಕುಂದರ್ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಲವು ಕಾರ್ಯವನ್ನ ಯಶಸ್ವಿಯಾಗಿ ನೆರವೇರಿಸಿದ್ದು, ಇದೀಗ ನೂತನವಾಗಿ ಶಾಲಾ ದತ್ತು ಸ್ವೀಕರಿಸಿದ ಶ್ರೀಯುತ ಆರ್.ಎನ್ ಶೆಟ್ಟಿಯವರು ಆಧುನಿಕ ಜಗತ್ತಿನಲ್ಲಿ ಅವಶ್ಯಕತೆ ಇರುವ ಎಲ್ಲಾ ರೀತಿಯ ಸಮರ್ಪಕ ಶಿಕ್ಷಣವನ್ನ ಸ್ಥಳೀಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನ ರೂಪಿಸಿದ್ದಾರೆ.

ಅದರಂತೆ ಇಂದು ಸರಿಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ನಾಲ್ಕು ಕೊಠಡಿಗಳನ್ನು ನಿರ್ಮಿಸಿ, ಎಲ್ ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತಿದೆ.

ಹಾಗೆ ಒಂದರಿಂದ ಐದನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಲು ಸಕಲ ಸಿದ್ಧತೆಗಳು ನಡೆಸಿದ್ದು, ಭೋದನೆಗೆ ನಾಲ್ಕು ಹೆಚ್ಚುವರಿ ಶಿಕ್ಷಕಿಯರನ್ನ ನೇಮಿಸಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಸುಸಜ್ಜಿತ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂದಿನ ಶಾಲಾ ಶೈಕ್ಷಣಿಕ ವರ್ಷದಿಂದ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಮಣ ಆಚಾರ್ ತಿಳಿಸಿದ್ದಾರೆ. ಸರ್ಕಾರಿ ಶಾಲೆಯ ಉನ್ನತೀಕರಣಕ್ಕೆ ಆರ್ ಎನ್ ಎಸ್ ಸಂಸ್ಥೆ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ದಿನ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಯೋಗದಲ್ಲಿ ಶಾಲಾ ಪರಿಸರದ ಸ್ವಚ್ಛತಾ ಕಾರ್ಯಕ್ರಮವನ್ನು ಶ್ರಮದಾನದ ಮೂಲಕ ನೆರವೇರಿಸಲಾಗಿದ್ದು, ತಮ್ಮೂರ ಸರ್ಕಾರಿ ಶಾಲೆಯ ಸುಚಿತ್ವಕ್ಕೆ ಹಲವರು ಕೈಜೋಡಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಆರ್ ಎನ್ ಎಸ್ ಸಂಸ್ಥೆಯ ಪರವಾಗಿ ನಾಗರಾಜ್ ಶೆಟ್ಟಿ ಮುರುಡೇಶ್ವರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಶಾಲಾ ಶಿಕ್ಷಣ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಶಾಲಾ ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಿದ್ದೆಯ ಭಂಗಿ ಗುರುತಿಸಿ ಫ್ಯಾನ್ ವೇಗ ನಿಯಂತ್ರಿಸುವ AI ಸಾಧನ | ಬೆಂಗಳೂರು ಟೆಕ್ಕಿಯ ಅದ್ಭುತ ಆವಿಷ್ಕಾರ!



















