ಹಾವೇರಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರವಷ್ಟೇ ಉಪ ಚುನಾವಣೆ ನಡೆದಿದೆ. ಆದರೆ, ಚುನಾವಣೆ ನಡೆದ ಮಾರನೇ ದಿನವೇ ಹಾವೇರಿ (Haveri) ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿರುವ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ ಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಇದು ಸಾಕಷ್ಟು ಅನುಮಾನ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ, ಶಿಗ್ಗಾಂವಿ ಉಪಚುನಾವಣೆಗೂ ಹಾಗೂ ಈ ಬ್ಯಾಲೆಟ್ ಬಾಕ್ಸ್ ಗಳಿಗೂ ಯಾವುದೇ ಸಂಬಂಧವಿಲ್ಲ.
ಉಪಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಈ ಬ್ಯಾಲೆಟ್ ಬಾಕ್ಸ್ ಗಳು ನಿರುಪಯಕ್ತವಾಗಿದ್ದವು. ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ. ಹೀಗಾಗಿ ಅವುಗಳನ್ನು ಗೋದಾಮಿನಲ್ಲಿ ಇಡಲಾಗಿತ್ತು. ಆದರೆ, ಯಾರೋ ದುಷ್ಕರ್ಮಿಗಳು ಅವುಗಳನ್ನು ಕಳ್ಳತನ ಮಾಡಿದ್ದಾರೆ. ಸಾಗಿಸಲು ಸಾಧ್ಯವಾಗದೆ ಕಾಲುವೆಯಲ್ಲಿ ಬಿಸಾಕಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಚುನಾವಣೆಯ ಮಾರನೇ ದಿನವೇ ಈ ಘಟನೆ ಬೆಳಕಿಗೆ ಬಂದಿದ್ದಕ್ಕೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು.