ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖ್ಯಾತ ತೆಲುಗು ಸ್ಟಾರ್ ಮಹೇಶ್ ಬಾಬುಗೆ ಇಡಿ ನೋಟಿಸ್ ಜಾರಿ ಮಾಡಿದೆ.
ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಸಂಸ್ಥೆಯ ಜಾಹೀರಾತು ಸೇರಿದಂತೆ ಪ್ರಚಾರ ವಿಚಾರಕ್ಕೆ ಮಹೇಶ್ ಬಾಬು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ನಿಂದ ಐದು ಕೋಟಿ ರೂ.ಗೂ ಅಧಿಕ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 16 ರಂದು ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಮೇಲೆ ಇಡಿ ದಾಳಿ ಮಾಡಿತ್ತು. ಕಂಪನಿಗಳ ಕಚೇರಿ ಹಾಗೂ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿತ್ತು. ಅದಾದ ನಂತರ ಈ ಬೆಳವಣಿಗೆ ನಡೆದಿದೆ. ಹೀಗೆ ಪಡೆದ ಹಣದಲ್ಲಿ ಮಹೇಶ್ ಬಾಬು 3.4 ಕೋಟಿ ರೂ.ಗಳನ್ನು ಚೆಕ್ ರೂಪದಲ್ಲಿ ಉಳಿದ 2.5 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ಪಡೆದಿದ್ದಾರೆ. ಇದು ಕಾನೂನು ಬಾಹಿರ ಅಂತಾ ಆರೋಪಿಸಲಾಗಿದ್ದು, ಇದಕ್ಕೆ ಸೂಕ್ತ ಉತ್ತರ ನೀಡುವಂತೆಯೂ ಇಡಿ ಸೂಚಿಸಿದೆ. ಸಾಯಿ ಸೂರ್ಯ ಡೆವಲಪರ್ ಎಂಡಿ ಸತೀಶ್ ಚಂದ್ರ ಮನೆಯಲ್ಲಿ ದೊರೆತ ದಾಖಲೆಯ ಆಧಾರದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಸದ್ಯ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಿನ್ಸ್ ಮಹೇಶ್ ವಿಚಾರಣೆಗೆ ಹಾಜರಾಗ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.