ಬೈಂದೂರು : ಹೊಟೇಲ್ ಗೆ ರೇಟಿಂಗ್ ಕೊಟ್ಟು ಹಣ ಗಳಿಸಿ ಎನ್ನುವ ಸಂದೇಶವನ್ನು ನಂಬಿ ಲಿಂಕ್ ಕ್ಲಿಕ್ಕಿಸಿ ತೆರೆದು ವ್ಯಕ್ತಿಯೊಬ್ಬರು ಬರೋಬ್ಬರಿ 6.16 ಲಕ್ಷ ರೂ. ಕಳೆದುಕೊಂಡ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ. ಹೆಗಡೆ, ಆನ್ ಲೈನ್ ವಂಚನೆಗೆ ಒಳಗಾದವರು.
ಅರ್ಚಕರ ಮೊಬೈಲ್ ಗೆ ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ಎನ್ನುವ ಅನಧಿಕೃತ ಲಿಂಕ್ ಬಂದಿದ್ದು, ಆ ಲಿಂಕನ್ನು ಅವರು ನಂಬಿ ಕ್ಲಿಕ್ಕಿಸಿ ತೆರೆದಿದ್ದಾರೆ. ಅದರಲ್ಲಿ ಹೊಟೇಲ್ಗೆ ರೇಟಿಂಗ್ ಕೊಟ್ಟು ಹಣ ಗಳಿಸಬಹುದು ಎಂಬ ವಿಷಯ ಉಲ್ಲೇಖಿಸಲಾಗಿದ್ದು, ಅದನ್ನು ನಂಬಿ ವಂಚನೆಗೆ ಒಳಗಾಗಿದ್ದಾರೆ.
ಅದರಂತೆ ಅರ್ಚಕರು ಪತ್ನಿಯ ಬ್ಯಾಂಕ್ ಖಾತೆಯಿಂದ 1,44,000 ರೂ.ಗಳನ್ನು ಕಳಿಸಿದ್ದರು. ಟಾಸ್ಕ್ ಪಾಯಿಂಟ್ ಶೇ. 90 ರಷ್ಟು ಆಗಿದ್ದು, ಶೇ. 100ರಷ್ಟು ಪಾಯಿಂಟ್ ಮಾಡಿದರೆ ಮಾತ್ರ ಹಾಕಿದ ಹಣ ಮರುಪಾವತಿ ಆಗುತ್ತದೆ ಎಂದು ವಂಚಕರು ಜಾಲದ ಪ್ರಕ್ರಿಯೆಲ್ಲಿ ತಿಳಿಸಿದ್ದರು. ವಂಚಕರ ತಂಡ ಹೇಳಿದಂತೆ ತೀರಾ ನಂಬಿ ಅದರಂತೆ ಅರ್ಚಕರು ರಮೇಶ ಎಂಬವರ ಖಾತೆಯಿಂದ ಸೆ. 2ರಂದು 2,72,700 ರೂ. ಕಳುಹಿಸಿದ್ದರು.
ಬಳಿಕ ನಿಮ್ಮ ಅಕೌಂಟ್ ಫ್ರೀಜ್ ಆಗಿದ್ದು, ಇನ್ನಷ್ಟು ಹಣ ಹಾಕಿದರೆ ಮಾತ್ರ ಅನ್ ಫ್ರೀಜ್ ಆಗಲಿದೆ ಎಂದು ಹೇಳಿ ವಂಚಕ ಜಾಲ ಮತ್ತಷ್ಟು ಭಯಭೀತರನ್ನಾಗಿಸಿತ್ತು. ಅಷ್ಟಾಗಿಯೂ, ಕ್ರಮವಾಗಿ 1,45,000 ರೂ. ಮತ್ತು 55,000 ರೂ. ವಂಚನೆಗೊಳಗಾದ ಅರ್ಚಕರು ಕಳುಹಿಸಿದ್ದರು. ಮತ್ತೆ ಮತ್ತೆ ಹಣ ಹಾಕುವಂತೆ ತಿಳಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು ಅಷ್ಟರಲ್ಲಿ ಒಟ್ಟು 6,16,700 ರೂ. ಕಳೆದುಕೊಂಡಿದ್ದರು.
ಈ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.