ಬೆಂಗಳೂರು: ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ನ್ಯೂಸ್ ವಿಭಾಗವು ರಾಜ್ಯದ 29 ಜಿಲ್ಲೆಗಳಲ್ಲಿ ಅರೆಕಾಲಿಕ ವರದಿಗಾರರ (ಸ್ಟ್ರಿಂಜರ್) ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿ 29 ಜಿಲ್ಲೆಗಳಲ್ಲಿ 60 ಅರೆಕಾಲಿಕ ವರದಿಗಾರರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮೇ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ನಗರದಲ್ಲಿ ಐವರು ಅರೆಕಾಲಿಕ ವರದಿಗಾರರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 28 ಜಿಲ್ಲೆಗಳಲ್ಲಿ ತಲಾ ಇಬ್ಬರು ವರದಿಗಾರರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆಲಸ ಮಾಡುವವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಪ್ಯಾಕೇಜ್ ನೀಡಲಾದರೆ, ಬೇರೆ ಜಿಲ್ಲೆಗಳಲ್ಲಿ ವರ್ಷಕ್ಕೆ 4 ಲಕ್ಷ ರೂ. ಸಂಬಳ ಸಿಗಲಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅದರಲ್ಲೂ, ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಬಿಡಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಸುದ್ದಿ ಕವರೇಜ್ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವವರ ಬಳಿ ಹಲವು ಉಪಕರಣಗಳು ಇರಬೇಕು. ವರದಿಗಾರಿಕೆಗೆ ಬೇಕಾದ ಕ್ಯಾಮೆರಾ, ಡಿ ಎಸ್ ಎನ್ ಜಿ ಮೂಲಕ ಲೈವ್ ಸುದ್ದಿ ಕವರೇಜ್ ಮಾಡಲು ಬೇಕಾದ ಉಪಕರಣಗಳನ್ನು ಹೊಂದಿರಬೇಕು. 4ಜಿ ಅಥವಾ 5ಜಿ ಇಂಟರ್ ನೆಟ್ ಇರುವ ಸ್ಮಾರ್ಟ್ ಫೋನ್ ಗಳನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಹೀಗೆ ಸಲ್ಲಿಸಿ…
‘PRASAR BHARATI (IPSB) DOORDARSHAN BENGALUURU’ ಹೆಸರಿನಲ್ಲಿ 1180 ರೂ. ಡಿಡಿ ತೆಗೆದು, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸಿ ಕಳುಹಿಸಬೇಕು. ‘Empanelment of Stringers for RNU, DDK, Bengaluru for (District Name)’ ಎಂದು ಅರ್ಜಿ ಲಕೋಟೆ ಮೇಲೆ ಬರೆದಿರಬೇಕು. ಸುದ್ದಿ ನಿರ್ದೇಶಕರು, ಪ್ರಾದೇಶಿಕ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ ಸಿ ನಗರ, ಬೆಂಗಳೂರು – 560006 ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು.