ಬೆಂಗಳೂರು: ಜೀವನ ಪೂರ್ತಿ ಮಕ್ಕಳಿಗಾಗಿಯೇ ದುಡಿದೆವು. ಮಕ್ಕಳೋ ಮದುವೆಯಾದ ಬಳಿಕ ಬದಲಾದರು. ನಮಗೊಂದು ಮನೆ ಬಿಟ್ಟು ಅವರು ದೂರದ ಊರಿಗೆ ಹೋದರು. ಮಗ-ಸೊಸೆ ಚೌಕಾಸಿ ಮಾಡಿ ಕಳುಹಿಸುವ ಹಣ ಔಷಧಕ್ಕೂ ಸಾಕಾಗುವುದಿಲ್ಲ. ಇಳಿ ವಯಸ್ಸಿನಲ್ಲಿ ಬದುಕಲು ಏನು ಮಾಡಬೇಕು ಎಂಬುದು ತುಂಬ ಹಿರಿಯ ನಾಗರಿಕರ ಅಳಲಾಗಿರುತ್ತದೆ. ಆದರೆ, ಸ್ವಂತದ್ದೊಂದು ಮನೆ ಇದ್ದರೆ, ಅದನ್ನು ರಿವರ್ಸ್ ಮಾರ್ಟ್ ಗೇಜ್ (ಒತ್ತೆ ಇಡುವುದು) (Reverse Mortgage) ಇರಿಸುವ ಮೂಲಕ ಮಾಸಿಕವಾಗಿ ಹಣ ಪಡೆಯಬಹುದು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ರಿವರ್ಸ್ ಮಾರ್ಟ್ ಗೇಜ್ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಏನಿದು ರಿವರ್ಸ್ ಮಾರ್ಟ್ ಗೇಜ್?
ಮಾರ್ಟ್ ಗೇಜ್ ಎಂದರೆ ನಾವು ಬ್ಯಾಂಕಿನಿಂದ ಸಾಲ ಪಡೆಯಲು ನಮ್ಮ ಮನೆಯನ್ನೋ, ಜಮೀನನ್ನೋ ಒತ್ತೆ ಇರಿಸುತ್ತವೆ. ರಿವರ್ಸ್ ಮಾರ್ಟ್ ಗೇಜ್ ನಲ್ಲಿ ಹಾಗಲ್ಲ. ನಾವು ಮನೆಯನ್ನು ಒತ್ತೆಯಿಟ್ಟರೆ, ಅದಕ್ಕೆ ಮೌಲ್ಯವನ್ನು ನಿಗದಿಪಡಿಸುವ ಬ್ಯಾಂಕುಗಳು ಮಾಸಿಕವಾಗಿ ನಾವು ಕೇಳಿದಷ್ಟು ಹಣವನ್ನು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತವೆ. ನಗರ ಪ್ರದೇಶಗಳಲ್ಲಾದರೆ ಹೆಚ್ಚಿನ ಮೊತ್ತ ಸಿಗುತ್ತದೆ.
ಜೀವನ ಪೂರ್ತಿ ಮಕ್ಕಳಿಗಾಗಿ ದುಡಿದರೂ ಅವರು ಕೊನೆಯಲ್ಲಿ ನೋಡಿಕೊಳ್ಳದಿರುವುದು ದುರದೃಷ್ಟದ ಸಂಗತಿಯೇ. ಆದರೆ, ಇದನ್ನೇ ಯೋಚಿಸುತ್ತ ಕೊರಗುವ ಬದಲು ಹಿರಿಯ ನಾಗರಿಕರು ಮನೆ ಸೇರಿ ಯಾವುದೇ ಆಸ್ತಿಯನ್ನು ರಿವರ್ಸ್ ಮಾರ್ಟ್ ಗೇಜ್ ಇರಿಸುವ ಮೂಲಕ ಇಳಿಸಂಜೆಯ ಜೀವನವನ್ನು ನಿರುಮ್ಮಳವಾಗಿ ಕಳೆಯಬಹುದಾಗಿದೆ.
ಬಡ್ಡಿದರ ಹೀಗಿದೆ
ರಿವರ್ಸ್ ಮಾರ್ಟ್ ಗೇಜ್ ಗೆ ಒಂದೊಂದು ಬ್ಯಾಂಕುಗಳು ಒಂದೊಂದು ಮಾದರಿಯಲ್ಲಿ ಬಡ್ಡಿದರ ವಿಧಿಸುತ್ತವೆ. ಎಚ್ ಡಿ ಎಫ್ ಸಿ ಬ್ಯಾಂಕ್ ಶೇ.8.75ರಷ್ಟು ಬಡ್ಡಿ ವಿಧಿಸಿದರೆ, ಆಕ್ಸಿಸ್ ಶೇ.10.05ರಷ್ಟು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.8.05ರಷ್ಟು ಬಡ್ಡಿದರ ವಿಧಿಸುತ್ತವೆ. ಬ್ಯಾಂಕ್ ಗಳ ಬಡ್ಡಿದರವು ಆಗಾಗ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾಗಿ, ನಿಮ್ಮ ಆಸ್ತಿಪತ್ರಗಳನ್ನು ಬ್ಯಾಂಕಿನಲ್ಲಿ ಇರಿಸಿ, ರಿವರ್ಸ್ ಮಾರ್ಟ್ ಗೇಜ್ ಮಾಡಿಸುವಾಗ ಇದೆಲ್ಲವನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ನಿಮ್ಮ ಮನೆಯದ್ದೋ, ಆಸ್ತಿಯದ್ದೋ ಮೌಲ್ಯವನ್ನು ಆಧರಿಸಿ ಬ್ಯಾಂಕುಗಳು ಮಾಸಿಕವಾಗಿ ಹಣ ನೀಡುತ್ತವೆ (ಹೆಚ್ಚಿನ ಹಣ ಬೇಕಾದರೆ ಹಣ ನೀಡುವ ಅವಧಿ ಕಡಿಮೆಯಾಗುತ್ತದೆ). ಹಾಗೊಂದು ವೇಳೆ, 15 ವರ್ಷಗಳವರೆಗೆ ಮಾಸಿಕ 20 ಸಾವಿರ ರೂ. ಬೇಕು ಎಂದು ಮಾರ್ಟ್ ಗೇಜ್ ಮಾಡಲಾಗಿದೆ ಎಂದಿಟ್ಟುಕೊಳ್ಳಿ. ಆಗ ದಂಪತಿಯು ಮೂರ್ನಾಲ್ಕು ವರ್ಷಕ್ಕೇ ಅಕಾಲಿಕವಾಗಿ ನಿಧನ ಹೊಂದಿದರೆ, ನಾಮಿನಿಗಳಿಗೆ ಉಳಿದ ಮೊತ್ತವನ್ನು ನೀಡಲಾಗುತ್ತದೆ. ಮಾರ್ಟ್ ಗೇಜ್ ಮಾಡಿದವರಿಗೆ ನೀಡಿದ ಹಣ, ಬಡ್ಡಿ ಕಡಿತಗೊಳಿಸಿ ಬ್ಯಾಂಕುಗಳು ಉಳಿದ ಹಣವನ್ನು ನೀಡುತ್ತವೆ.
ಗಮನಿಸಿ: ಇದು ಮನೆ ಒತ್ತೆಯಿಟ್ಟು, ಮಾಸಿಕವಾಗಿ ಹಣ ಪಡೆಯುವ ಯೋಜನೆಯ ಕುರಿತು ಮಾಹಿತಿ ಅಷ್ಟೇ ಹೊರತು ಶಿಫಾರಸು ಅಲ್ಲ. ಹಾಗಾಗಿ, ಬ್ಯಾಂಕ್ ಗಳಲ್ಲಿ ರಿವರ್ಸ್ ಮಾರ್ಟ್ ಗೇಜ್ ಮಾಡಿಸುವ ಮುನ್ನ ಆರ್ಥಿಕ ತಜ್ಞರ ಸಲಹೆಗಳನ್ನು ಪಡೆದೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅತ್ಯವಶ್ಯಕ. ಮಾಹಿತಿ ದೃಷ್ಟಿಯಿಂದ ಯೋಜನೆ ಕುರಿತು ವಿವರಣೆ ನೀಡಲಾಗಿದೆ ಅಷ್ಟೆ.