ಬೆಂಗಳೂರು: ಬೆಳಗಾವಿ ಸೇರಿದಂತೆ ಗಡಿಯಲ್ಲಿ ಮಹಾರಾಷ್ಟ್ರ ಎಂಇಎಸ್ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಮಾರ್ಚ್ 22 ರಂದು ಕನ್ನಡ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಸರ್ಕಾರದ ಬೆಂಬಲ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ವಿಪಕ್ಷ ನಾಯಕ ನಾರಾಯಣಸ್ವಾಮಿ ಈ ವಿಷಯ ಪ್ರಸ್ತಾಪಿಸಿದರು. ಕನ್ನಡ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿದ್ದಾರೆ. ಮಾರ್ಚ್ 22ರಂದು ಎಸ್ಸೆಸ್ಸೆಲ್ಸಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಕ್ಕಳು ಹಾಗೂ ಪಾಲಕರು ಭಯ ಭೀತರಾಗಿದ್ದಾರೆ. ಸರ್ಕಾರದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಡಿಕೆಶಿ, ಈ ಬಂದ್ ಅವಶ್ಯಕತೆ ಇರಲಿಲ್ಲ. ಸಂಘಟನೆಗಳು ಸರ್ಕಾರದ ಜೊತೆ ಮಾತಾಡಬೇಕಿತ್ತು. ನಾನು ಕೂಡಾ ಮಾರ್ಚ್ 22ರಂದು ವರ್ಲ್ಡ್ ವಾಟರ್ ಡೇ ಮಾಡಬೇಕು ಅಂತ ಇದ್ದೆ. ಬಂದ್ಗೆ ನಾವು ಬೆಂಬಲ ನೀಡುವುದಿಲ್ಲ. ಅಧಿಕಾರಿಗಳ ಜೊತೆ ಮಾತಾಡಿ ಮತ್ತೊಮ್ಮೆ ಈ ಬಗ್ಗೆ ಮಾತನಾಡುತ್ತೇನೆ ಅಂತಾ ಹೇಳಿದ್ದಾರೆ.