ಬೆಂಗಳೂರು: ಕೈದಿಗಳ ಊಟದ ವ್ಯವಸ್ಥೆ ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿರುವ ಕೈದಿಗಳಿಗೆ ಸರ್ಕಾರವು ಪ್ರತಿ ದಿನ 85 ರೂ. ಖರ್ಚು ಮಾಡುತ್ತದೆ.
ವೇತನ ಹೆಚ್ಚಳದ ಹೆಸರಿನಲ್ಲಿ ಲಕ್ಷಾಂತರ ರೂ. ಹಣವನ್ನು ಶಾಸಕರು ಪಡೆಯುತ್ತಾರೆ. ಆದರೆ, ಕೈದಿಗಳ ಊಟಕ್ಕೆ ಕೇವಲ 85 ರೂ. ನಿಗದಿ ಮಾಡಿದ್ದಾರೆ. ಈ ಮಾಹಿತಿಯು ಐಟಿಐ ಮೂಲಕ ಹೊರ ಬಿದ್ದಿದೆ.
ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಕೇಳಿರುವ ಪ್ರಶ್ನೆಗೆ ಕೇಂದ್ರ ಕಾರಾಗೃಹ ಇಲಾಖೆ ಉತ್ತರ ನೀಡಿದೆ. ದುಡ್ಡಿದ್ದವರಿಗೆ ಜೈಲಿನಲ್ಲಿ ಐಷಾರಾಮಿ ಜೀವನ ಸಿಗುತ್ತದೆ. ಇಲ್ಲದವರೆಗೆ ಬರೀ ಅನ್ನ, ಗಂಜಿ. ವಾರದಲ್ಲಿ ಒಂದು ದಿನ ಮಾತ್ರ ನಾನ್ ವೆಜ್ ಊಟ ಸಿಗುತ್ತದೆ. ಅಲ್ಲದೇ, ಊಟದ ಸಮಯಕ್ಕೂ ಈಗ ವಿರೋಧ ವ್ಯಕ್ತವಾಗುತ್ತಿದೆ. ಬೆಳಗ್ಗೆ 7.15ರಿಂದ 8.30ರ ವರೆಗೆ ಉಪಹಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ 11.30ರ ವರೆಗೂ ಮಧ್ಯಾಹ್ನ ಊಟಕ್ಕೆ ಸಮಯ ನಿಗದಿ ಮಾಡಲಾಗಿದೆ. ರಾತ್ರಿ ಊಟದ ಸಮಯ ಸಂಜೆ 5:15 ರಿಂದ 5:45 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಸಂಜೆ 5:45ರ ಬಳಿಕ ಯಾವುದೇ ಊಟೋಪಚಾರ ಇಲ್ಲ. ಮಾರನೆ ದಿನ ಬೆಳಗ್ಗೆ ಮತ್ತೆ ಉಪಹಾರ ನೀಡಲಾಗುತ್ತದೆ. ಅಂದರೆ ಸುದೀರ್ಘ 14 ಗಂಟೆಗಳ ಕಾಲ ಊಟ ಇಲ್ಲ ಎನ್ನಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿವೆ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.