ಚಾಮರಾಜನಗರ: ಮಲೆಮಹದೇಶ್ವರನ ದರ್ಶನವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಪಡೆದಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಇದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ಯಲ್ಲಮ್ಮ, ಚಾಮುಂಡಿ, ಮಹದೇಶ್ವರ ಪ್ರಾಧಿಕಾರ ರಚಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಏಕೆ ಮಾಡಲಿಲ್ಲ? ಸರ್ವ ಜನಾಂಗಕ್ಕೂ ಒಳಿತಾಗಬೇಕು ಎಂಬುವುದು ನಮ್ಮ ಉದ್ಧೇಶ. ನಮಗೆ ರಾಜಕಾರಣ ಮುಖ್ಯವಲ್ಲ. ಎಲ್ಲ ಜನರಿಗೂ ನೆಮ್ಮದಿ ಸಿಗಬೇಕು ಎನ್ನುವುದು ನಮ್ಮ ಉದ್ಧೇಶ. ಹೀಗಾಗಿಯೇ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ.
ಚಾಮರಾಜನಗರ ಅಭಿವೃದ್ಧಿಗಾಗಿ ಇಡೀ ಸರ್ಕಾರ ಇಂದು ಮಹದೇಶ್ವರ ಬೆಟ್ಟಕ್ಕೆ ಬಂದಿದೆ. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ನಾವು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಈ ವೇಳೆ ಡಿಸಿಎಂ ಡಿಕೆಶಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೊದಲ ಪೂಜೆಯಲ್ಲಿ ಭಾಗಿಯಾದರೆ ಇಷ್ಟಾರ್ಥ ನೆರವೇರುತ್ತೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಬ್ಬರೂ ಪೂಜೆಯಲ್ಲಿ ಭಾಗವಹಿಸಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿ ಕುಳಿತು ಡಿಕೆಶಿ ಧ್ಯಾನ ಮಾಡಿದ್ದಾರೆ.
