ಕಲಬುರಗಿ: ಡಿಕೆ ಶಿವಕುಮಾರ್ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಿದ್ದು, ಈಗಾಗಲೇ ಬಿಜೆಪಿ ಜೊತೆ ಡಿಕೆಶಿ ಒಂದು ಚರ್ಚೆ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಲು ದೆಹಲಿಯಲ್ಲಿ ವಿಜಯೇಂದ್ರ ಜೊತೆ ಸೇರಿ ಒಂದು ಚರ್ಚೆ ಮಾಡಿದ್ದರು. 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆತಂದು “ನಮಸ್ತೆ ಸದಾ ವತ್ಸಲೇ ಹಾಡುತ್ತೀವಿ” ಎಂದು ಹೇಳಿದ್ದಾರೆ. ಈ ಮೂಲಕ ಡಿಕೆಶಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ನಮ್ಮ ಆಂತರಿಕ ವರದಿಯಲ್ಲಿ ಡಿಕೆಶಿ ಕಡೆ 12 ಶಾಸಕರು ಇಲ್ಲ ಎಂದು ವರದಿ ಬಂದಿದೆ. ಹೀಗಾಗಿ ನಾವು ಸರ್ಕಾರ ಮಾಡಲು ಪ್ರಯತ್ನಿಸಿಲ್ಲ ಎಂದು ಬಿಜೆಪಿ ಹೈಕಮಾಂಡ್ ಹೇಳಿತ್ತು. ವಿಜಯೇಂದ್ರ ಹಾಗೂ ಡಿಕೆಶಿ ಇವರಿಬ್ಬರು ಕುಳಿತುಬಿಟ್ಟಿದ್ದರೆ ಕರ್ನಾಟಕವನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಡಿಕೆಶಿ ಬೇಡ ಎಂದು ನಮ್ಮವರು ಹೇಳಿದ್ದಾರೆ ಎಂದಿದ್ದಾರೆ.
ಡಿಕೆಶಿ ಪಾಪ ನಮಸ್ತೆ ಸದಾ ವತ್ಸಲ್ಯ ಎಂದು ಹೇಳಿದ್ದರು. ನಮಸ್ತೆ ಸೋನಿಯಾ ಮಾತೆ ಇಟಲಿ ಕಾ ಪುತ್ರ ಎಂದು ಹಾಡಿದ್ದರೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಸೋನಿಯಾ ಗಾಂಧಿ ಡಿಕೆಶಿ ಅವರನ್ನು ಸಿಎಂ ಮಾಡುತ್ತಿದ್ದರು. ಭಾರತ ಮಾತೆಗೆ ನಮಸ್ತೆ ಎಂದರೆ ಇವರಿಗೆ (ಕಾಂಗ್ರೆಸ್ ಗೆ) ನೋವಾಗುತ್ತದೆ. ಇಟಲಿ ಮಾತೆಗೆ ಒಂದು ಹಾಡು ಕಟ್ಟಿ ಹಾಡಬೇಕು. ಸೋನಿಯಾ ಮಾತೆ ಎಂದು ಹಾಡಿದರೆ ಡಿಕೆಶಿ 24 ಗಂಟೆಯಲ್ಲಿ ಸಿಎಂ ಆಗುತ್ತಾರೆ ಎಂದು ಟೀಕಿಸಿದ್ದಾರೆ.
ಇನ್ನು, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಆಯ್ಕೆ ಮಾಡುವ ಬದಲು ಸನಾತನ ಧರ್ಮದ ಮೇಲೆ ನಂಬಿಕೆ ಇರುವ ಸಾಧನೆ ಮಾಡಿದ ದಲಿತ ಅಥವಾ ಇತರೆ ಮಹಿಳೆಯರನ್ನು ಆಯ್ಕೆ ಮಾಡಬೇಕಾಗಿತ್ತು. ಸಿದ್ದರಾಮಯ್ಯ ಅವರಿಗೆ ಸದ್ಯ ಮುಸ್ಲಿಮರೇ ಮತ ಹಾಕಿದಂತೆ ಮಾಡುತ್ತಿದ್ದಾರೆ. ಹಿಂದೂಗಳು ಓಟ್ ಹಾಕಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಚಾಮುಂಡಿ ದೇವಿಯ ಆರಾಧನೆ ಹಿಂದೂಗಳು ಮಾಡುತ್ತಾರೆ. ಡಿಕೆಶಿ ಇದು ಸಾರ್ವಜನಿಕ ಎಂದು ಹೇಳುತ್ತಾರೆ, ಹಾಗಿದ್ದರೇ ದರ್ಗಾ, ಮಸೀದಿಗಳನ್ನು ಸಾರ್ವಜನಿಕ ಎಂದು ಹೇಳಿ. ಸಿದ್ದರಾಮಯ್ಯ ತಮ್ಮ ಜಾತಿಗೆ ಏನು ಮಾಡಿಲ್ಲ. ಎಲ್ಲಾ ಮುಸ್ಲಿಮರಿಗೇ ಮಾಡುತ್ತಿದ್ದಾರೆ. ಹಿಂದೂಗಳಿಗೆ ಮಾಡುವ ಅಪಮಾನಕ್ಕೆ ಜನ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.