ರಾಮನಗರ: ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಹೇಗೆ ರೀ, ಅದೆಲ್ಲ ಸುಳ್ಳು. ಗ್ರಾಮ ಸಭೆಯಲ್ಲಿ ಯಾರೋ ಒಬ್ಬರು ಹೇಳಿದರೆ ಆಗುತ್ತದೆಯಾ? ಯಾರೋ ಒಬ್ಬರು ಆರೋಪ ಮಾಡಿದ್ದಾರೆಂಬ ಕಾರಣಕ್ಕೆ ಅದೆಲ್ಲ ಸತ್ಯ ಅಂತಾ ಒಪ್ಪಿಕೊಳ್ಳಲು ಆಗುತ್ತದೆಯಾ? ಎಂದು ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯತ್ ಸಭೆಯಲ್ಲಿ ತೀರ್ಮಾನ ಮಾಡುವರು ಯಾರು? ಅಲ್ಲಿ ಕೇವಲ ಒಬ್ಬನೇ ಒಬ್ಬ ಸದಸ್ಯ, ಸಾರ್ವಜನಿಕರು ತೀರ್ಮಾನ ಮಾಡುವುದಿಲ್ಲ. ಪಂಚಾಯಿತಿ ತೀರ್ಮಾನ ಮಾಡುತ್ತದೆ. ಮಂತ್ರಿ ಹಾಗೂ ಸರ್ಕಾರಕ್ಕೆ ಅದು ಹೇಗೆ ಸಂಬಂಧ ಬರುತ್ತದೆ. ಆ ರೀತಿ ಆಗುವುದಿಲ್ಲ. ಅದೆಲ್ಲ ಸುಳ್ಳು ಎಂದಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಬಿ.ಆರ್. ಪಾಟೀಲ್ ಅವರಿಗೆ ಸಂಪೂರ್ಣ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಿ ಈ ಕುರಿತು ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.