ಖಾಸಗಿ ವಿಡಿಯೋ ಇದೆ ರಿಲೀಸ್ ಮಾಡ್ತೀವಿ ಅಂತಾ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಮಾಜಿ ನಿರೂಪಕಿ ದಿವ್ಯಾ ವಂಸತ ಹಾಗೂ ಕೃಷ್ಣಮೂರ್ತಿ ವಿರುದ್ಧವೀಗ ಎಫ್ಐಆರ್ ದಾಖಲಾಗಿದೆ.

ಖ್ಯಾತ ಜ್ಯೋತಿಷ್ಯಜ್ಞ ಆನಂದ್ ಗುರೂಜಿಗೆ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ಖಾಸಗಿ ವಿಡಿಯೋಗಳಿವೆ ಅಂತಾ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಪದೇಪದೆ ಕರೆ ಮಾಡಿ ಹಣ ನೀಡುವಂತೆ, ಧಮ್ಕಿ ಹಾಕಿದ್ದಾರೆ.

ಮೊನ್ನೆ ಕಾರು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿ, ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಆನಂದ್ ಗುರೂಜಿ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ರು.

ಸಾಮ್ರಾಟ್ ಹಾಗೂ ಮುಖವಾಡ ಯುಟ್ಯೂಬ್ ಚಾನಲ್ ಹೆಸರಿನಲ್ಲಿ ಚಾರಿತ್ರ್ಯವಧೆ ನಡೆಸಿದ್ದಾರೆ ಅಂತಲೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನಲೆಯಲ್ಲೀಗ ಚಿಕ್ಕಜಾಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಶೀಘ್ರವೇ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿಗೆ ವಿಚಾರಣೆಗೆ ಬುಲಾವ್ ನೀಡಲು ಖಾಕಿ ಸಿದ್ಧತೆ ನಡೆಸಿದೆ.