ಅಹಮದಾಬಾಬ್: ಗುಜರಾತ್ನ ಅಹಮದಾಬಾದ್ನಲ್ಲಿ ಏರಿಂಡಿಯಾ ವಿಮಾನ ಪತನಗೊಂಡ ಬಳಿಕ ಚಿತ್ರ ಹಾಗೂ ಸಂಗೀತ ನಿರ್ದೇಶಕರೊಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಕುಟುಂಬ ತೀವ್ರ ಹುಡುಕಾಟ ನಡೆಸುತ್ತಿದೆ. ಗುರುವಾರದಿಂದಲೇ ಮಹೇಶ್ ಕಲಾವಾಡಿಯಾ ಅವರು ಕಣ್ಮರೆಯಾಗಿದ್ದು, ಅವರ ಕೊನೆಯ ಮೊಬೈಲ್ ಲೊಕೇಶನ್ ವಿಮಾನ ಪತನಗೊಂಡ ಕೇವಲ 700 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಹೀಗಾಗಿ, ವಿಮಾನವು ಸ್ಫೋಟಗೊಂಡ ಸ್ಥಳದಲ್ಲಿ ಮಹೇಶ್ ಅವರೂ ಇದ್ದರೇ, ನೆಲದಲ್ಲಿ ಮೃತಪಟ್ಟವರ ಪೈಕಿ ಅವರೂ ಒಬ್ಬರಾಗಿರಬಹುದೇ ಎಂಬ ಅನುಮಾನ ಮೂಡಿದೆ.
ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಈಗ ತಮ್ಮ ಡಿಎನ್ಎ ಮಾದರಿಯನ್ನು ಆಸ್ಪತ್ರೆಗೆ ಸಲ್ಲಿಸಿದ್ದಾರೆ. ಮೃತದೇಹಗಳ ಪೈಕಿ ಯಾವುದಾದರೂ ಮೃತದೇಹವು ಈ ಡಿಎನ್ಎಗೆ ಹೊಂದಾಣಿಕೆಯಾದರೆ, ಕಳೇಬರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರೋಡಾ ನಿವಾಸಿಯಾದ ಮಹೇಶ್ ಕಲವಾಡಿಯಾ ಅವರು ಮಹೇಶ್ ಜಿರಾವಾಲಾ ಎಂದೂ ಹೆಸರುವಾಸಿಯಾಗಿದ್ದರು. ಅವರು ಮ್ಯೂಸಿಕ್ ಆಲ್ಪಂಗಳ ನಿರ್ದೇಶನದ ಮೂಲಕ ಖ್ಯಾತಿ ಗಳಿಸಿದ್ದರು. ಗುರುವಾರ ಅವರು ಲಾ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಲೆಂದು ತೆರಳಿದ್ದರು ಎಂದು ಅವರ ಪತ್ನಿ ಹೇತಾಲ್ ತಿಳಿಸಿದ್ದಾರೆ.
ನನ್ನ ಪತಿ ಅಂದು ಮಧ್ಯಾಹ್ನ 1.14ಕ್ಕೆ ನನಗೆ ಕರೆ ಮಾಡಿದರು. ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ಬಂದಿದ್ದೆ. ನನ್ನ ಕೆಲಸ ಮುಗೀತು. ಮನೆಗೆ ಹೊರಟಿದ್ದೇನೆ ಎಂದಿದ್ದರು. ಆದರೆ, ಅವರು ಮನೆಗೇ ಬರಲೇ ಇಲ್ಲ. ಎಷ್ಟೇ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ಪೊಲೀಸರಿಗೆ ದೂರು ನೀಡಿದ ಬಳಿಕ ಅವರು ತನಿಖೆ ಆರಂಭಿಸಿದ್ದಾರೆ. ಅವರ ಮೊಬೈಲ್ ಲೊಕೇಷನ್ ವಿಮಾನ ಅವಘಡ ನಡೆದ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಪತ್ನಿ ಹೇತಾಲ್ ಮಾಹಿತಿ ನೀಡಿದ್ದಾರೆ.
ಸುಮಾರು 1.40ರ ವೇಳೆಗೆ ನನ್ನ ಪತಿಯ ಫೋನ್ ಸ್ವಿಚ್ ಆಫ್(ವಿಮಾನ ಟೇಕಾಫ್ ಆದ ಒಂದು ನಿಮಿಷದ ಬಳಿಕ) ಆಯ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕೂಡ ನಾಪತ್ತೆಯಾಗಿದೆ. ಆದರೆ, ಅವರು ಯಾವತ್ತೂ ಆ ಮಾರ್ಗದಲ್ಲಿ ಮನೆಗೆ ಬರುತ್ತಿರಲಿಲ್ಲ. ಆದರೂ ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ ಎಂದೂ ಹೇತಾಲ್ ಹೇಳಿದ್ದಾರೆ.
ಬಹುತೇಕ ಎಲ್ಲ ದೇಹಗಳೂ ಸುಟ್ಟು ಕರಕಲಾಗಿರುವ ಕಾರಣ, ಮೃತದೇಹಗಳ ಗುರುತು ಪತ್ತೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿಯೊಬ್ಬರ ಡಿಎನ್ಎ ಪರೀಕ್ಷೆ ನಡೆಸಿಯೇ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತಿದೆ. ಈಗಾಗಲೇ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಸೇರಿದಂತೆ 47 ಸಂತ್ರಸ್ತರ ಗುರುತು ಪತ್ತೆ ಹಚ್ಚಿ, ಹಸ್ತಾಂತರಿಸಲಾಗಿದೆ.