ನೋಯ್ಡಾ: ಅನಾಮಧೇಯ ವ್ಯಕ್ತಿಗಳು ಕರೆ ಮಾಡುವುದು, ನಿಮ್ಮ ವಿರುದ್ಧ ಕೇಸ್ ದಾಖಲಾಗಿದೆ, ಅದರಿಂದ ಖುಲಾಸೆ ಮಾಡಬೇಕು ಎಂದರೆ ಲಕ್ಷಾಂತರ ರೂ. ಕೊಡಬೇಕು ಎಂದು ‘ಡಿಜಿಟಲ್ ಅರೆಸ್ಟ್’(Digital Arrest) ಹೆಸರಲ್ಲಿಜನರಿಗೆ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ರೀತಿ, ಉತ್ತರ ಪ್ರದೇಶದ ನೋಯ್ಡಾದಲ್ಲಿಇಡೀ ಕುಟುಂಬಸ್ಥರನ್ನು ಡಿಜಿಟಲ್ ಅರೆಸ್ಟ್ ನಲ್ಲಿಇರಿಸಿದ ವಂಚಕರು, ಐದು ದಿನಗಳಲ್ಲಿ1.1 ಕೋಟಿ ರೂಪಾಯಿಯನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಚಂದ್ರಭನ್ ಪಾಲಿವಾಲ್ ಎಂಬ ವ್ಯಕ್ತಿಗೆ ಫೆಬ್ರವರಿ 1ರಂದು ವಂಚಕನೊಬ್ಬ ಕರೆ ಮಾಡಿದ್ದಾನೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುತ್ತಿದ್ದೇನೆ, ನಿಮ್ಮ ಸಿಮ್ ಕಾರ್ಡ್ ಶೀಘ್ರದಲ್ಲೇ ಬ್ಲಾಕ್ ಆಗಲಿದೆ ಎಂದು ಬೆದರಿಕೆ ಹಾಕಿದ್ದಾನೆ. ಮತ್ತೊಬ್ಬ, ಮುಂಬೈ ಪೊಲೀಸ್ ಠಾಣೆಯಿಂದ ಐಪಿಎಸ್ ಅಧಿಕಾರಿ ಮಾತನಾಡುತ್ತಿದ್ದೇನೆ ಎಂದು ಕರೆ ಮಾಡಿ ಹೇಳಿದ್ದಾನೆ. ನಿಮ್ಮ ವಿರುದ್ಧ 24 ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ. ಕೇಸ್ ಗಳನ್ನು ರದ್ದುಗೊಳಿಸಬೇಕು ಎಂದರೆ, ಹಣ ಕೊಡಬೇಕು ಎಂದು ಹೇಳಿದ್ದಾರೆ.
ಚಂದ್ರಭನ್ ಪಾಲಿವಾಲ್ ಅವರು ಇದರಿಂದ ವಿಚಲಿತರಾಗಿ, ಮನೆಯ ಬೇರೆ ಸದಸ್ಯರೊಂದಿಗೆ ಮಾತನಾಡಿದ್ದಾರೆ. ವಂಚಕರು ವಿಡಿಯೊ ಕಾಲ್ ಮೂಲಕ ಎಲ್ಲರಿಗೂ ಇದೇ ಕತೆ ಹೆಣೆದಿದ್ದಾರೆ. ಐದು ದಿನಗಳವರೆಗೆ ಇದೇ ಕೃತ್ಯ ಎಸಗಿದ ವಂಚಕರು, ಕುಟುಂಬಸ್ಥರಿಂದ ಸುಮಾರು 1.1 ಕೋಟಿ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಂಚನೆ ಎಸಗಿದ್ದಾರೆ ಎಂಬುದನ್ನು ತಿಳಿದ ಚಂದ್ರಭನ್ ಪಾಲಿವಾಲ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.



















