ಬೆಂಗಳೂರು : ಪತ್ನಿಯ ಕುತ್ತಿಗೆ ಮೇಲೆ ಕಾಲಿಟ್ಟು ಪತಿಯು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾವ್ಯ ಮೃತ ಮಹಿಳೆ. ದನಿಯಪ್ಪ ಕೊಲೆಗೈದ ಪತಿ. ದನಿಯಪ್ಪ ತನಿಖೆ ವೇಳೆ ಮಹತ್ವದ ಮಾಹಿತಿ ಬಾಯ್ಬಿಟ್ಟಿದ್ದಾನೆ. ದಂಪತಿಗಳ ನಡುವೆ ಆಸ್ತಿ ವಿಚಾರಕ್ಕೆ ಗಂಭೀರ ಕಲಹ ಉಂಟಾಗಿತ್ತು. ಕೋಟ್ಯಂತರ ಮೌಲ್ಯದ ಮನೆ ಹಾಗೂ ಆಸ್ತಿಗಳು ಪತ್ನಿ ಕಾವ್ಯ ಮತ್ತು ಆತನ ತಾಯಿ ಹೆಸರಿನಲ್ಲಿ ಇದ್ದವು. ಕನ್ಸ್ಟ್ರಕ್ಷನ್ ವ್ಯವಹಾರದಲ್ಲಿ ಹಣ ಗಳಿಸಿದ್ದ ದನಿಯಪ್ಪ, ಆಸ್ತಿಗಳನ್ನು ಮಾರಾಟ ಮಾಡಿ ಊರಿಗೆ ತೆರಳಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಯೋಜನೆ ರೂಪಿಸಿದ್ದನು. ಇದರ ಭಾಗವಾಗಿ ಅಥಣಿ ತಾಲೂಕಿನ ತನ್ನ ಊರಲ್ಲಿ ಜನರಿಗೆ ಬಾಡೂಟ ವ್ಯವಸ್ಥೆ ಮಾಡಿ ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಸಿದ್ದನು ಎನ್ನಲಾಗಿದೆ.
ಆದರೆ ಬೆಂಗಳೂರನ್ನು ಬಿಟ್ಟು ಹೋಗುವುದಕ್ಕೂ, ಆಸ್ತಿ ಮಾರಾಟಕ್ಕೂ ಪತ್ನಿ ಕಾವ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ ಎಂದು ತಿಳಿದುಬಂದಿದೆ. ಇದೇ ವಿಚಾರ ದಂಪತಿಗಳ ನಡುವೆ ಕಲಹಕ್ಕೆ ಕಾರಣವಾಗಿ, ಪೂರ್ವಯೋಜಿತವಾಗಿ ಹತ್ಯೆ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಮಕ್ಕಳು ಶಾಲೆಗೆ ಹೋದ ನಂತರ ಗಲಾಟೆ ಆರಂಭಿಸಿ, ಪತ್ನಿಯ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಜೀವ ಬಿಡುವಂತೆ ಬೇಡಿಕೊಂಡರೂ ಬಿಡದೆ ಕ್ರೂರವಾಗಿ ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಪೀಣ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸದ್ಯ ಕರಣದ ಹಿನ್ನೆಲೆ ಹಾಗೂ ಇತರ ಅಂಶಗಳನ್ನು ಪೊಲೀಸರು ಸವಿಸ್ತಾರವಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ವರ್ಷ ತುಂಬುವ ಮೊದಲೇ ಗಂಡನಿಗೆ ಚಟ್ಟ ಕಟ್ಟಿಸಿದ್ಲಾ ಹೆಂಡತಿ? ಕಾರು ಕೊಡಿಸುತ್ತೇನೆ ಅಂತ ಕರೆಸಿ ಬಾವನನ್ನೇ ಕೊಲೆಗೈದ ಬಾಮೈದ



















