ಬೆಂಗಳೂರು: ಚಿತ್ರದುರ್ಗ (Chitradurga) ದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಆದರೆ, ಮಧ್ಯೆ ಆರೋಪಿಗಳ ವಿಕೃತ ಮನಸ್ಥಿತಿಯ ಮುಖವಾಡ ಕಳಚಿ ಬೀಳುತ್ತಿವೆ.
ಈಗ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್ ನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಸಾಯುವ ಮುನ್ನ ಮನಬಂದಂತೆ ಹಲ್ಲೆ ಮಾಡಲಾಗಿದೆ. ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬೆನ್ನ ಮೇಲೆ ಬಾಸುಂಡೆ ಬರುವ ರೀತಿಯಲ್ಲಿ ರೇಣುಕಾಸ್ವಾಮಿಯನ್ನು ಥಳಿಸಲಾಗಿದೆ. ಕಿವಿ ಕತ್ತರಿಸಿ, ಕೈಗೆ ಕರೆಂಟ್ ಶಾಕ್ ಕೊಟ್ಟು ಕ್ರೂರವಾಗಿ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಒಂದು ಕಿವಿ ಇಲ್ಲ. ಹಾಗೇ ರೇಣುಕಾಸ್ವಾಮಿಯ ಬಾಯಿಗೆ ಒದ್ದು ಛಿದ್ರ-ಛಿದ್ರಗೊಳಿಸಲಾಗಿದೆ. ಭೀಕರ ಹಲ್ಲೆಯ ಪರಿಣಾಮ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ ಎಂದು ತಿಳಿದು ಬಂದಿದೆ.
ದರ್ಶನ್ ಅವರ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಹಲ್ಲೆಯ ತೀವ್ರತೆಗೆ ಆತ ಶೆಡ್ ನಲ್ಲಿಯೇ ಸಾವನ್ನಪ್ಪಿದ್ದಾನೆ. ನಂತರ ಸುಮ್ಮನಹಳ್ಳಿ ಫ್ಲೈಓವರ್ ಕೆಳಗೆ ಶವ ಬಿಸಾಡಿ ಹೋಗಿದ್ದಾರೆ. ಈಗ ಪೊಲೀಸರು ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.