ಟೆಹ್ರಾನ್: ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಕಾಲು ಕಳೆದುಕೊಂಡು ಕೋಮಾದಲ್ಲಿದ್ದಾರೆ ಎಂಬ ಬೆಚ್ಚಿಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ. ಬ್ರಿಟಿಷ್ ಪತ್ರಿಕೆ ‘ದಿ ಸನ್’ (The Sun) ಈ ವರದಿಯನ್ನು ಪ್ರಕಟಿಸಿದ್ದು, ಇರಾನ್ನ ಯುದ್ಧತಂತ್ರಗಳನ್ನು ಪ್ರಸ್ತುತ ಮುನ್ನಡೆಸುತ್ತಿರುವವರು ಯಾರು ಎಂಬ ಗಂಭೀರ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.\
ತಂದೆಯನ್ನು ಬಲಿಪಡೆದ ದಾಳಿಯಲ್ಲೇ ಗಾಯ?
56 ವರ್ಷದ ಮೊಜ್ತಬಾ ಖಮೇನಿ ಅವರು ದಾಳಿಯಲ್ಲಿ ಕನಿಷ್ಠ 1 ಕಾಲನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಹೊಟ್ಟೆ ಅಥವಾ ಯಕೃತ್ತಿಗೆ (ಲಿವರ್) ತೀವ್ರ ಹಾನಿಯಾಗಿದೆ ಎಂದು ವರದಿ ತಿಳಿಸಿದೆ. ಫೆಬ್ರವರಿ 28ರಂದು ಅವರ 86 ವರ್ಷದ ತಂದೆ ಆಯತೊಲ್ಲಾ ಅಲಿ ಖಮೇನಿ ಅವರನ್ನು ಬಲಿಪಡೆದ ವೈಮಾನಿಕ ದಾಳಿಯಲ್ಲೇ ಇವರೂ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ ಟೆಹ್ರಾನ್ನ ಸಿನಾ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯ ನಡುವೆ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ “ಗಂಭೀರವಾಗಿದೆ” ಎಂದು ಟೆಹ್ರಾನ್ನ ಮೂಲಗಳು ತಿಳಿಸಿವೆ.
ನೈಜ ವಿಚಾರ ಮುಚ್ಚಿಡುತ್ತಿರುವ ಇರಾನ್?
ಇರಾನ್ನ ಆರೋಗ್ಯ ಸಚಿವ ಹಾಗೂ ಯುದ್ಧದ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ಅಪಾರ ಅನುಭವವಿರುವ ಹಿರಿಯ ಟ್ರಾಮಾ ಸರ್ಜನ್ ಮೊಹಮ್ಮದ್ ರೆಜಾ ಜಫರ್ಘಂಡಿ ಅವರು ಈ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದಾರೆ. ಮೊಜ್ತಬಾ ಇರುವ ಆಸ್ಪತ್ರೆಯ ಘಟಕವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಯಾರಿಗೂ ಪ್ರವೇಶವಿಲ್ಲದಂತೆ ಕಾವಲು ಕಾಯಲಾಗುತ್ತಿದೆ. ಈ ನಡುವೆ, ನಾಯಕನ ಆರೋಗ್ಯದ ಕುರಿತಾದ ಅನುಮಾನಗಳಿಗೆ ತೆರೆ ಎಳೆಯಲು ಯತ್ನಿಸಿರುವ ಇರಾನ್ ಸರ್ಕಾರಿ ವಾಹಿನಿಯು, ಅಧಿಕಾರ ವಹಿಸಿಕೊಂಡ ನಂತರದ ಮೊಜ್ತಬಾ ಖಮೇನಿ ಅವರ ಮೊದಲ ಅಧಿಕೃತ ಹೇಳಿಕೆಯನ್ನು ಗುರುವಾರ ಪ್ರಸಾರ ಮಾಡಿದೆ. ಆದರೆ, ಈ ಹೇಳಿಕೆಯನ್ನು ಖುದ್ದು ಮೊಜ್ತಬಾ ಅವರೇ ಬಂದು ಓದಿ ಹೇಳಿಲ್ಲ ಅಥವಾ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿಲ್ಲ, ಬದಲಾಗಿ ಸುದ್ದಿ ನಿರೂಪಕರು ಓದಿ ಹೇಳಿದ್ದಾರೆ. ಇದು ಅವರ ಆರೋಗ್ಯಕ್ಕೆ ಸಂಬಂಧಿಸಿದ ಅನುಮಾನಗಳಿಗೆ ಪುಷ್ಟಿ ನೀಡಿವೆ. ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಬೆದರಿಕೆ ಹಾಗೂ ಇರಾನಿಯನ್ನರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ಈ ಹೇಳಿಕೆ ಒಳಗೊಂಡಿದೆ.
ನಾಯಕನಿಲ್ಲದೆಯೂ ಮುಂದುವರಿದಿದೆಯೇ ಯುದ್ಧ?
ಮೊಜ್ತಬಾ ಅವರು ಕೋಮಾದಲ್ಲಿರುವ ಕಾರಣ, ಇರಾನ್ನ ಸೇನಾ ಕಾರ್ಯಾಚರಣೆಗಳು ಸರ್ವೋಚ್ಚ ನಾಯಕನ ನೇರ ಆದೇಶವಿಲ್ಲದೆಯೇ ನಡೆಯುತ್ತಿರಬಹುದು ಎಂದು ವರದಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ಲೇಷಕರೊಬ್ಬರು, “ಅವರ ತಂದೆ ರೂಪಿಸಿರುವ ವ್ಯವಸ್ಥೆ ಎಷ್ಟೊಂದು ಸುಭದ್ರವಾಗಿದೆ ಎಂದರೆ, ಅದನ್ನೊಬ್ಬ ‘ಅದೃಶ್ಯ ಶಕ್ತಿ’ ಕೂಡ ಮುನ್ನಡೆಸಬಹುದು. ಇದೇ ಕಾರಣಕ್ಕೆ ಇರಾನ್ನ ಕ್ಷಿಪಣಿಗಳು ಮತ್ತು ಡ್ರೋನ್ಗಳು ಇಂದಿಗೂ ಕಾರ್ಯಾಚರಣೆ ನಡೆಸುತ್ತಿವೆ ಮತ್ತು ಯುದ್ಧ ಮುಂದುವರಿದಿದೆ” ಎಂದಿದ್ದಾರೆ.
ಇರಾನ್ನಲ್ಲಿರುವ ತೀವ್ರ ಇಂಟರ್ನೆಟ್ ನಿರ್ಬಂಧ ಮತ್ತು ನಾಯಕನಿಗೆ ನೀಡುತ್ತಿರುವ ಚಿಕಿತ್ಸೆಯ ಸುತ್ತಲಿನ ಬಿಗಿ ಭದ್ರತೆಯಿಂದಾಗಿ ಈ ವರದಿಗಳನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ : ಇರಾನ್ನ ಹಾರ್ಮುಜ್ ಜಲಸಂಧಿಯಲ್ಲಿದೆ ನಿಸರ್ಗದ ವಿಸ್ಮಯ: ಇಲ್ಲಿದೆ ಕೆಂಪು ಕಡಲತೀರ, ಮರಳನ್ನು ತಿನ್ನಲೂ ಸಾಧ್ಯ!



















