ಬೆಂಗಳೂರು : ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಲಾಗುತ್ತಿದ್ದು, ಧರ್ಮಸ್ಥಳ ಕ್ಷೇತ್ರದ ವಿರುದ್ಧವೂ ವ್ಯವಸ್ಥಿತ ಅಪಪ್ರಚಾರ ಮಾಡಲಾಗುತ್ತಿದೆ. ಅಪಪ್ರಚಾರ ಬಯಲಿಗೆಳೆಯಲು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ್ ಒತ್ತಾಯಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಧರ್ಮಸ್ಥಳ ಪ್ರಕರಣದಲ್ಲಿ ಪಿತೂರಿಗಳನ್ನು ಬಯಲಿಗೆಳೆಯುವ ಕೆಲಸಗಳಾಗಬೇಕು. ಎಸ್ಐಟಿ ರಚನೆ ಆದಾಗ ಸಾಕಷ್ಟು ಅನುಮಾನ ಸೃಷ್ಟಿಯಾಗಿತ್ತು. ಆದರೂ ತನಿಖೆ ಮುಗಿದು ಸತ್ಯ ಹೊರಬರಲಿ, ಅಲ್ಲಿಯವರೆಗೂ ನಾವು ಕಾಯುತ್ತೇವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರದ ಹಿಂದೆ ಯಾರ ಕೈವಾಡವಿದೆ ಎಂಬುವುದು ಬಯಲಾಗಬೇಕು ಎಂದಿದ್ದಾರೆ.
ಬಿಜೆಪಿಯವರು ಮೊದಲು ಮಾತನಾಡಿಲ್ಲ, ಈಗ ಮಾತನಾಡುತ್ತಿದ್ದಾರೆ ಎನ್ನುವುದುದು ಸರಿಯಲ್ಲ. ನಾವು ಪ್ರಾರಂಭದಿಂದಲೂ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೇವೆ ಎಂದ ಅವರು, ತನಿಖೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಅನಾಮಿಕ ವ್ಯಕ್ತಿ ಮೇಲೆ ಅನುಮಾನ, ಎಲ್ಲ ರೀತಿಯ ಪ್ರಶ್ನೆಗಳಿವೆ ಎಂದು ಉಲ್ಲೇಖಿಸಿದ್ದಾರೆ.