ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ಕಿತ್ತಾಟವಾಗುತ್ತಿದೆ. ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದಿದ್ದರು. ಎಸ್ಐಟಿ ರಚನೆಯಾದಾಗಲೂ ಸುಮ್ಮನಿದ್ದರು. ಈಗ ಏಕಾಏಕಿ ‘ಧರ್ಮಸ್ಥಳ ಚಲೋ’ ಎನ್ನುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು (ಸೋಮವಾರ) ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ ಸಿಬಿಐ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದಿತ್ತು, ಹಾಗೂ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
2/7/2024ರಲ್ಲಿ ಸಿಬಿಐ ಡೆಪ್ಯುಟಿ ಐಜಿ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದ್ದರು. ಅದರಿಂದ ದಯವಿಟ್ಟು ಕೇಸ್ ಗಳನ್ನು ಕೋಡುವುದಕ್ಕೆ ಹೋಗಬೇಡಿ. ಕೊಟ್ಟರೆ ಮಾನವ ಸಂಪನ್ಮೂಲ ನೀವೇ ನೀಡಿ ಎಂದು ಲೇಟರ್ನಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಮಗೆ ಕೇಸ್ ಗಳನ್ನು ಕೊಟ್ಟರೆ ಕರ್ನಾಟಕ ಪೊಲೀಸರಿಂದಲೇ ಸಿಬ್ಬಂದಿ ಬೇಕಾಗುತ್ತಾರೆ. ಸಿಬ್ಬಂದಿ, ಕಚೇರಿ, ವಾಹನ ವ್ಯವಸ್ಥೆ ಎಲ್ಲ ನೀವೇ ಕೂಡಿ ಎಂದು ಕೇಳಿದ್ದಾರೆ. ನಮ್ಮ ಅಧಿಕಾರಿಗಳನ್ನು ತೆಗೆದುಕೊಂಡು ತನಿಖೆ ಮಾಡೋಕೆ ಸಿಬಿಐಯೇ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಇದರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿದ ಯಾವ ವಿಷಯ ಇದೆ. ಈಗಾಗಲೇ ಗೃಹ ಸಚಿವರು, ಸಿಎಂ ತಿರಸ್ಕರಿಸಿದ್ದಾರೆ. ಬೇಕಿದ್ದರೆ ಎನ್ಐಎ ಅವರೇ ಸ್ವಯಂಪ್ರೇರಿತ ಕೇಸ್ ತೆಗೆದುಕೊಳ್ಳಲಿ. ಇದು ಆರೆಸ್ಸೆಸ್ vs ಆರೆಸ್ಸೆಸ್ ಜಗಳ. ಅದನ್ನು ರಾಜ್ಯ ಸರಕಾರಕ್ಕೆ ಹಚ್ಚುವ ಉನ್ನಾರ ನಡೆದಿದೆ. ಹೀಗಾಗಿ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಎಂದು ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕುರ್ಚಿ ಉಳಿಸಿಕೊಳ್ಳೋಕೆ ಮಾಡ್ತಾ ಇರೋದು. ಇದರಲ್ಲಿ ಬೇರೆ ಏನು ಇಲ್ಲ ಎಂದು ಹೇಳಿದ್ದಾರೆ.



















