ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಡಿಜಿಪಿ ಅಲೋಕ್ ಕುಮಾರ್ ಸಂಪೂರ್ಣ ನಿಗಾ ವಹಿಸಲಿದ್ದು, ಜೈಲಿನ ಒಳಗಿನ ಅಕ್ರಮಗಳಿಗೆ ಮೊಬೈಲ್ ಫೋನ್ ಅಥವಾ ಗಾಂಜಾ ಸಾಗಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

ಜೈಲು ಒಳಗಿರುವ ಮೊಬೈಲ್, ಗಾಂಜಾ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾದರೆ, ಅದಕ್ಕೆ ಕಾರಣರಾದವರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ. ಪರಪ್ಪನ ಅಗ್ರಹಾರ ಜೈಲನ್ನು ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿಗೆ ಒಳಪಡಿಸಲಾಗಿದೆ. ಜೈಲಿನ ಎಂಟ್ರಿ ಗೇಟ್, ಸ್ಕ್ರೀನಿಂಗ್ ಏರಿಯಾ, ವಿಸಿಟರ್ಸ್ ಮಾತನಾಡುವ ಸ್ಥಳ, ಮಹಿಳಾ ಬ್ಯಾರಕ್, ವಿಚಾರಣಾಧೀನ ಖೈದಿಗಳ ಬ್ಯಾರಕ್ ಹಾಗೂ ಸಜಾ ಖೈದಿಗಳ ಬ್ಯಾರಕ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಒಟ್ಟು 380 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಜೈಲಿನ ಪ್ರತಿಯೊಂದು ಮೂಲೆ ಮೂಲೆಗೂ ನಿಗಾ ವಹಿಸಲಾಗಿದೆ. ಡಿಜಿಪಿ ಅಲೋಕ್ ಕುಮಾರ್ ತಮ್ಮ ಚೇಂಬರ್ನಲ್ಲೇ ಕುಳಿತು ಜೈಲಿನ ಸಂಪೂರ್ಣ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡುತ್ತಾರೆ.
ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಅಲರ್ಟ್ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಅಧಿಕಾರಿಗಳ ಕಳ್ಳಾಟವಾಗಲಿ, ಖೈದಿಗಳ ಚಲನವಲನವಾಗಲಿ ಎಲ್ಲವನ್ನೂ ಡಿಜಿಪಿ ಗಮನಿಸಲಿದ್ದು, ತಪ್ಪು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಹಿನ್ನೆಲೆ ಎಲ್ಲರೂ ಹೈ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ : ಪೊಲೀಸ್ ಪೇದೆಗಳ ಮೇಲೆ ‘ಕೈ’ ಮುಖಂಡನ ಮಕ್ಕಳ ಹಲ್ಲೆ ಕೇಸ್ | ಸೂಕ್ತ ಕ್ರಮಕ್ಕಾಗಿ ಪೊಲೀಸ್ ಅಧಿಕಾರಿಗಳಿಗೆ ಮಹಿಳಾ ಆಯೋಗ ಪತ್ರ
\


















