ನನ್ನಜ್ಜ ಈಶ್ವರನ ವರಪುತ್ರ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜನರೊಂದಿಗೆ ಜನತಾದಳ ಅಭಿಯಾನದ ಹಿನ್ನೆಲೆಯಲ್ಲಿ ಬೆಂಗಳೂರಿನ ನಡೆದ ಚಾಲನೆ ಹಾಗೂ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಅಜ್ಜ ಎಚ್.ಡಿ. ದೇವೇಗೌಡ ಮತ್ತು ತಂದೆ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಕೊಡುಗೆಗಳು ನನ್ನ ಬದುಕಿನ ದಾರಿದೀಪವಾಗಲಿವೆ. “ಪ್ರತಿಯೊಬ್ಬರಿಗೂ ಅಪ್ಪನೇ ಹೀರೋ” ಎಂದು ಹೇಳಿದ ನಿಖಿಲ್, ದೇವೇಗೌಡರನ್ನು ‘ಈಶ್ವರನ ವರಪುತ್ರ’ ಎಂದು ಬಣ್ಣಿಸಿದರು.
“1962ರಲ್ಲಿ ದೇವೇಗೌಡರಿಗೆ ಟಿಕೆಟ್ ಸಿಗದಿದ್ದರೂ ಜನರು ಅವರನ್ನು ತಲೆಮೇಲೆ ಕೂರಿಸಿ ಆಯ್ಕೆ ಮಾಡಿದರು. ರೈತನ ಮಗನಾಗಿ ದೇಶದ ಅತ್ಯುನ್ನತ ಸ್ಥಾನದಲ್ಲಿ ಕೆಲಸ ಮಾಡಿದ ಅವರು, ನೆಲ, ಜಲ, ಭಾಷೆಗೆ ಅಪಾರ ಕಾಳಜಿ ತೋರಿದ್ದಾರೆ. ಅವರ ಸಮಕಾಲೀನರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ” ಎಂದರು.
ಕ್ಷಮೆ ಕೋರಿದ ನಿಖಿಲ್
ಕಾರ್ಯಕ್ರಮಕ್ಕೆ 20 ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದ ನಿಖಿಲ್, “ಇನ್ನೆಂದೂ ಇಂತಹ ತಪ್ಪಾಗದು” ಎಂದು ಭರವಸೆ ನೀಡಿದರು. ಜೆಡಿಎಸ್ ಪಕ್ಷದ ಬಲವರ್ಧನೆಗೆ ತಾವು ರೂಪಿಸಿರುವ ಯೋಜನೆಯನ್ನು ವಿವರಿಸಿದ ಅವರು, 58 ತಾಲೂಕುಗಳಲ್ಲಿ ಮೊದಲ ಹಂತದ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದರು.
“ಪ್ರತಿ ತಾಲೂಕಿನಲ್ಲಿ ಕಾರ್ಯಕರ್ತರ ಮನೆಯಲ್ಲಿ ವಾಸವಿರುವೆ. ಕಾಲಬೈರವೇಶ್ವರನ ಆಶೀರ್ವಾದದಿಂದ ಪಕ್ಷಕ್ಕೆ ಹೊಸ ಯುಗ ಆರಂಭವಾಗಿದೆ. ತುಮಕೂರಿನಿಂದ ಪ್ರವಾಸ ಶುರುಮಾಡುತ್ತೇನೆ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಪ್ರವಾಸ ಮಾಡಿ, ಪ್ರತಿ ಬೂತ್ನಲ್ಲಿ 10 ಜನರ ತಂಡ ರಚಿಸಿ, ಸದಸ್ಯತ್ವ ಅಭಿಯಾನ ನಡೆಸುತ್ತೇವೆ. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸುತ್ತೇವೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಆಶಯ
ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿಯಾಗಿ ಕಾಣಬೇಕೆಂಬ ತೀವ್ರ ಆಶಯ ವ್ಯಕ್ತಪಡಿಸಿದರು. “ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಸಾರಾಯಿ, ಲಾಟರಿ ನಿಷೇಧದಂತಹ ಐತಿಹಾಸಿಕ ನಿರ್ಧಾರ ಕೈಗೊಂಡರು. ಎರಡನೇ ಬಾರಿ ರೈತರ ಪರವಾಗಿ ಕೆಲಸ ಮಾಡಿದರು. ಪಂಚರತ್ನ ಯೋಜನೆ ಜಾರಿಗೆ ತರಲು ಅವರು ಮತ್ತೆ ಸಿಎಂ ಆಗಬೇಕು” ಎಂದು ಹೇಳಿದರು.
ಕುಮಾರಸ್ವಾಮಿ ಅವರ ಸಾಧನೆಗಳನ್ನು ಶ್ಲಾಘಿಸಿದ ನಿಖಿಲ್, “ವೈಜಾಗ್ ಸ್ಟೀಲ್ ಪ್ಲಾಂಟ್ಗೆ 1,000 ಕೋಟಿ ರೂ. ಮತ್ತು ರಾಜ್ಯಕ್ಕೆ 4,500 ಇವಿ ಬಸ್ಗಳನ್ನು ಒದಗಿಸಿದ್ದಾರೆ. ಅವರ ಫೋಟೋಗೆ ಹಾಲಿನ ಅಭಿಷೇಕ ಮಾಡಿರುವುದನ್ನು ನೋಡಿದ್ದೇವೆ. ಮೂರು ಹೃದಯ ಶಸ್ತ್ರಚಿಕಿತ್ಸೆಯ ನಂತರವೂ ಕಾರ್ಯಕರ್ತರ ಕರೆಗೆ ಓಗೊಡುವ ಅವರ ಛಲ ಅಪಾರ. 24 ಗಂಟೆ ರಾಜ್ಯಕ್ಕಾಗಿ ಕೆಲಸ ಮಾಡುತ್ತಾರೆ” ಎಂದು ಬಣ್ಣಿಸಿದರು.