ಕಲಬುರಗಿ : ಸೂರ್ಯನ ನಾಡು ಕಲಬುರಗಿಯಲ್ಲಿ ಬೇಸಿಗೆಯ ಪ್ರಖರತೆ ಏರುತ್ತಿದ್ದಂತೆ ಜಲಕ್ಷಾಮದ ಭೀತಿ ಹೆಚ್ಚಾಗಿದೆ. ಮಾರ್ಚ್ ತಿಂಗಳಲ್ಲೇ ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಜಿಲ್ಲೆಯ ಸುಮಾರು 286 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕೊಡ ನೀರಿಗಾಗಿ ಜನರು ಕಿಲೋಮೀಟರ್ಗಟ್ಟಲೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಳಂದ ತಾಲೂಕಿನ ಕವಲಗಾ ಗ್ರಾಮದಲ್ಲಿ ಹನಿ ನೀರಿಗೆ ಜನ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಹಗಲು-ರಾತ್ರಿ ಎನ್ನದೇ ನಲ್ಲಿ ನೀರು ಹಿಡಿಯಲು ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಗ್ರಾಮದಲ್ಲಿನ ಸಾರ್ವಜನಿಕ ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿದ ಕಾರಣ, ಜನ ಸಂಪೂರ್ಣವಾಗಿ ನಲ್ಲಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.
ಗಂಟೆಗಟ್ಟಲೆ ಕಾಯುತ್ತಿದ್ದರೂ ಒಂದು ಕೊಡ ನೀರು ಸಿಗುತ್ತಿಲ್ಲ. ನಿದ್ದೆ, ಊಟ ಬಿಟ್ಟು ನೀರಿಗಾಗಿ ಕಾಯುವುದೇ ಮುಖ್ಯ ಕೆಲಸವಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಆಳಂದ ತಾಲೂಕಿನಲ್ಲಿ 72 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಫಜಲಪುರದಲ್ಲಿ 60, ಕಲಬುರಗಿ ತಾಲೂಕಿನಲ್ಲಿ 53 ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಜೇವರ್ಗಿ, ಸೇಡಂ ಹಾಗೂ ಚಿಂಚೋಳಿ ಭಾಗಗಳಲ್ಲಿಯೂ ಅಂತರ್ಜಲ ಬತ್ತುತ್ತಿರುವುದು ಆತಂಕ ಮೂಡಿಸಿದೆ.
ಅಧಿಕಾರಿಗಳ ಅಂದಾಜು ಪ್ರಕಾರ ಏಪ್ರಿಲ್ನಲ್ಲಿ 94 ಹಾಗೂ ಮೇ ತಿಂಗಳಲ್ಲಿ 90 ಗ್ರಾಮಗಳಲ್ಲಿ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಪರ್ಯಾಯ ಜಲಮೂಲಗಳ ಹುಡುಕಾಟಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿರುವ 1227 ಸರಕಾರಿ ಬೋರ್ವೆಲ್ಗಳಲ್ಲಿ ಕೇವಲ 754 ಮಾತ್ರ ಕಾರ್ಯನಿರ್ವಹಿಸುತ್ತಿವೆ. 465 ಬೋರ್ವೆಲ್ಗಳು ನೀರಿಲ್ಲದೆ ಅಥವಾ ದುರಸ್ಥಿತಿಯಲ್ಲಿ ಇವೆ. ಸಮಸ್ಯೆ ನಿವಾರಣೆಗೆ 303 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಕೆಟ್ಟ ಬೋರ್ವೆಲ್ಗಳ ಪುನಶ್ಚೇತನ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಇನ್ನೊಂದೆಡೆ, ಬಿಸಿಲಿನ ತಾಪ ಹೆಚ್ಚಾದಂತೆ ಕೆರೆ-ಕಟ್ಟೆಗಳು ಹಾಗೂ ಹಳ್ಳಗಳು ಬತ್ತಿದ್ದು, ಜಾನುವಾರುಗಳಿಗೂ ನೀರಿನ ತೀವ್ರ ಕೊರತೆ ಉಂಟಾಗಿದೆ. ಜಾನುವಾರುಗಳಿಗೆ ನೀರು ಒದಗಿಸಲು ಮಾಲೀಕರು ಮೈಲುಗಟ್ಟಲೆ ಅಲೆದಾಡುತ್ತಿದ್ದಾರೆ.
ತಕ್ಷಣ ಗೋಕಟ್ಟೆಗಳನ್ನು ಭರ್ತಿ ಮಾಡುವುದು ಹಾಗೂ ಬತ್ತಿದ ಕೆರೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜನ-ಜಾನುವಾರುಗಳ ದಾಹ ತೀರಿಸುವಂತೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು : ಕೃಷಿ ಭೂಮಿಯಲ್ಲೇ ಬೀಡು ಬಿಟ್ಟ ಕಾಡಾನೆಗಳು.. ರೈತರಲ್ಲಿ ಆತಂಕ



















