ಚಿಕ್ಕಬಳ್ಳಾಪುರ : ಜಮೀನು ವಿವಾದವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಕೆಗೆ 70 ಸಾವಿರ ಲಂಚ ಪಡೆದ ಆರೋಪದಲ್ಲಿ ASI ಹಾಗೂ PSI ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್ಐ ವೆಂಕಟೇಶ್ ಇಬ್ಬರನ್ನ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮೊಟ್ಲೂರು ಗ್ರಾಮದ ರಘು ಎಂಬಾತನ ಬಳಿ ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆಗಾಗಿ ಎಎಸ್ಐ ವೆಂಕಟೇಶ್ 1 ಲಕ್ಷ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಹಣದ ಪೈಕಿ ಮೊದಲ ಕಂತಾಗಿ ರಘು ಅವರಿಂದ 70,000 ರೂಪಾಯಿ ಹಣವನ್ನು ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಎಎಸ್ಐ ವೆಂಕಟೇಶ್ರನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ
ಈ ಬೆನ್ನಲ್ಲೇ ಅವರನ್ನು ವಿಚಾರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್ಐ ಶರಣಪ್ಪ ಅವರ ಪಾತ್ರವನ್ನು ಖಚಿತಪಡಿಸಿಕೊಂಡು ಅವರನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಇದನ್ನೂ ಓದಿ : ನಂಜನಗೂಡು ದೇಗುಲದ ದಾಸೋಹಭವನ ದ್ವಾರದಲ್ಲೇ ಮಾಂಸಹಾರ ಸೇವಿಸಿದ ಕಿಡಿಗೇಡಿ!



















