ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ 13 ಮಂದಿಯನ್ನು ಬಲಿ ಪಡೆದ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ನಾಲ್ವರು ವೈದ್ಯರ ನೋಂದಣಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ರದ್ದುಗೊಳಿಸಿದೆ.
ಈ ಕುರಿತು ಶನಿವಾರ ನೋಟಿಸ್ ಹೊರಡಿಸಿರುವ ಆಯೋಗವು, ವೈದ್ಯರಾದ ಮುಜಫರ್ ಅಹ್ಮದ್, ಆದೀಲ್ ಅಹ್ಮದ್ ರಾಥರ್, ಮುಜಾಮಿಲ್ ಶಕೀಲ್ ಮತ್ತು ಶಾಹೀನ್ ಸಯೀದ್ ಅವರ ಭಾರತೀಯ ವೈದ್ಯಕೀಯ ನೋಂದಣಿ (IMR) ಮತ್ತು ರಾಷ್ಟ್ರೀಯ ವೈದ್ಯಕೀಯ ನೋಂದಣಿ (NMR) ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಈ ಆದೇಶದನ್ವಯ, ಈ ನಾಲ್ವರು ಇನ್ನು ಮುಂದೆ ಭಾರತದ ಯಾವುದೇ ಭಾಗದಲ್ಲಿ ವೈದ್ಯಕೀಯ ವೃತ್ತಿ ನಡೆಸುವಂತಿಲ್ಲ ಅಥವಾ ಯಾವುದೇ ವೈದ್ಯಕೀಯ ಹುದ್ದೆಯನ್ನು ಹೊಂದುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವೈದ್ಯಕೀಯ ವೃತ್ತಿ ಘನತೆಗೆ ವಿರುದ್ಧವಾದ ನಡವಳಿಕೆ
ಜಮ್ಮು -ಕಾಶ್ಮೀರ ಪೊಲೀಸ್ ಇಲಾಖೆ ಹಾಗೂ ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶ ವೈದ್ಯಕೀಯ ಮಂಡಳಿಗಳು ಹಂಚಿಕೊಂಡ ಸಾಕ್ಷ್ಯಾಧಾರಗಳನ್ನು ಆಧರಿಸಿ ಎನ್ಎಂಸಿ ಈ ಕಠಿಣ ಕ್ರಮ ಕೈಗೊಂಡಿದೆ. ಈ ವೈದ್ಯರು ಭಯೋತ್ಪಾದನಾ ಚಟುವಟಿಕೆಗಳಲ್ಲಿ “ಭಾಗಿಯಾಗಿರುವುದು ಮೇಲ್ನೋಟಕ್ಕೆ” ಕಂಡುಬಂದಿರುವುದಾಗಿ ವರದಿಯಾಗಿದೆ. “ಈ ನಾಲ್ವರು ವೈದ್ಯರ ಆಪಾದಿತ ನಡವಳಿಕೆಯು ವೈದ್ಯಕೀಯ ವೃತ್ತಿಯಿಂದ ನಿರೀಕ್ಷಿಸಲಾಗುವ ಸಮಗ್ರತೆ, ಯೋಗ್ಯತೆ ಮತ್ತು ಸಾರ್ವಜನಿಕ ನಂಬಿಕೆಯ ಗುಣಮಟ್ಟಗಳಿಗೆ ಅಸಮಂಜಸವಾಗಿದೆ,” ಎಂದು ಎನ್ಎಂಸಿ ತನ್ನ ನೋಟಿಸ್ನಲ್ಲಿ ತಿಳಿಸಿದೆ.
ಈ ರದ್ದತಿ ಆದೇಶವು ದೇಶಾದ್ಯಂತ ಜಾರಿಯಲ್ಲಿರುತ್ತದೆ. ಎಲ್ಲಾ ರಾಜ್ಯ ವೈದ್ಯಕೀಯ ಮಂಡಳಿಗಳು ತಮ್ಮ ದಾಖಲೆಗಳನ್ನು ನವೀಕರಿಸಬೇಕು ಮತ್ತು ಈ ನಾಲ್ವರು ಯಾವುದೇ ಸಂದರ್ಭದಲ್ಲೂ ವೈದ್ಯಕೀಯ ವೃತ್ತಿಯನ್ನು ಮುಂದುವರಿಸದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಎನ್ಎಂಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದನ್ನೂ ಓದಿ: ಶ್ರೀನಗರ ಠಾಣೆಯಲ್ಲಿ ಸ್ಪೋಟ.. ಇದು ಆಕಸ್ಮಿಕ ಘಟನೆ, ಭಯೋತ್ಪಾದಕ ಪಿತೂರಿ ಅಲ್ಲ | ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ


















