ಬೆಂಗಳೂರು: ಸ್ಮಾರ್ಟ್ ಮೀಟರ್ ಮೂಲಕ ಹಗಲು ದರೋಡೆ ಮಾತ್ರವಲ್ಲದೆ, ಗ್ರಾಹಕರಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್ ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಡಾ.ಸಿ.ಎನ್.ಅಶ್ವಥನಾರಾಯಣ್ ನೇತೃತ್ವದ ಬಿಜೆಪಿ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಮಾರ್ಟ್ ಮೀಟರ್ ಕುರಿತಂತೆ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದೇವೆ ಎಂದರು.
ಈ ಹಗರಣದಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಸಾವಿರಾರು ಕೋಟಿ ಲೂಟಿ ನಡೆಯುತ್ತಿದೆ. ರಾಜ್ಯ ಸರಕಾರ, ಇಂಧನ ಇಲಾಖೆ ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿ ಆಗಿರುವುದಾಗಿ ರಾಜ್ಯಪಾಲರ ಗಮನ ಸೆಳೆಯುವುದಾಗಿ ಹೇಳಿದರು.
ಈ ಕುರಿತು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ಮತ್ತೊಮ್ಮೆ ನೆನಪೋಲೆ ಕೊಡಲಾಗಿದೆ ಎಂದು ವಿವರಿಸಿದರು.
ಅಧಿಕಾರ ದುರ್ಬಳಕೆ ಮಾಡಿದ ಇಂಧನ ಸಚಿವರು, ಇತರ ಅಧಿಕಾರಿಗಳು, ಗುತ್ತಿಗೆ ಕೊಟ್ಟು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ, ಹಗಲು ದರೋಡೆ ಮಾಡಿದ ಸ್ಮಾರ್ಟ್ ಮೀಟರ್ ಹಗರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಕೇಂದ್ರ ವಿದ್ಯುತ್ ಆಯೋಗದ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುತ್ತಿರುವುದು ಪ್ರಥಮ ಉಲ್ಲಂಘನೆ. ಇಲ್ಲಿ ದುಬಾರಿ ದರ ಇದೆ. ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲಾಗಿದೆ. ಕಾನೂನಿನ ಉಲ್ಲಂಘನೆ, ಅಧಿಕಾರ ದುರ್ಬಳಕೆ ಮಾಡಿದ ಕುರಿತು ರಾಜ್ಯಪಾಲರ ಗಮನಕ್ಕೆ ತಂದಿದ್ದಾಗಿ ವಿವರಿಸಿದರು. ಚಿನ್ನ ಸ್ಮಗ್ಲಿಂಗ್ ಕುರಿತ ತೀವ್ರ ತನಿಖೆ ನಡೆದು ಇನ್ನಷ್ಟು ವಿವರ ಹೊರಬರುವ ವಿಶ್ವಾಸವಿದೆ. ಇದನ್ನು ಸ್ವಾಗತಿಸುವುದಾಗಿ ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ರತ್ನಗಂಬಳಿ ಹಾಸಿ ಸುಖದಲ್ಲಿ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಸಮರ್ಪಣಾ ಸಮಾವೇಶ, ಸಾಧನಾ ಸಮಾವೇಶ ಎಲ್ಲವೂ ಬೂಟಾಟಿಕೆ ಎಂದು ಅವರು ಟೀಕಿಸಿದರು. ಇದು ಲೂಟಿ ಸರಕಾರ. ರಾಜ್ಯದಲ್ಲಿ ಸಂತಸದಲ್ಲಿ ಮತ್ತು ಆನಂದವಾಗಿ ಇರುವವರು ಮುಖ್ಯಮಂತ್ರಿ ಮತ್ತು ಅಧಿಕಾರದಲ್ಲಿರುವ ಸಚಿವ ಸಂಪುಟದ 35 ಜನರ ತಂಡ ಎಂದು ಆರೋಪಿಸಿದರು.
ಸರಕಾರದ ನಗರ ಪ್ರವಾಸ ಕೇವಲ ನಾಟಕ…
ಸರಕಾರದ ಬೆಂಗಳೂರು ನಗರ ಪ್ರವಾಸ ಕೇವಲ ನಾಟಕವಾಗಿದೆ. ಮಳೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಲು ಇವರ ಕೆಟ್ಟ ಆಡಳಿತ- ಅವ್ಯವಸ್ಥೆಯೇ ಕಾರಣ ಎಂದು ಟೀಕಿಸಿದರು. ಯಾವ ಕ್ರಮವನ್ನೂ ವಹಿಸಿಲ್ಲ; ಜನರ ರಕ್ಷಣೆಗೆ ಬಂದಿಲ್ಲ ಎಂದು ದೂರಿದರು.
ಹೂಳೆತ್ತುವ ಕಾರ್ಯವೇ ಆಗಿಲ್ಲ; ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಈ ರೀತಿಯ ದುಸ್ಥಿತಿಗೆ ಬೆಂಗಳೂರಿನ ಮುಳುಗಡೆ, ಹಲವಾರು ಜನರು ಪ್ರಾಣ ಕಳಕೊಂಡಿದ್ದು, ಎಲ್ಲೆಡೆ ಅಸ್ತವ್ಯಸ್ಥ ಬದುಕಿಗೆ ಈ ರಾಜ್ಯ ಸರಕಾರ, ಇವರ ಆಡಳಿತವೇ ಮುಖ್ಯ ಕಾರಣ ಎಂದು ಆರೋಪಿಸಿದರು. ಈ ಕಾಂಗ್ರೆಸ್ ಸರಕಾರದಿಂದ ನಗರಕ್ಕೆ ಏನೂ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಮತ್ತು ಶಾಸಕ ಕೆ.ಗೋಪಾಲಯ್ಯ, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಪಕ್ಷದ ಪ್ರಮುಖರು ಈ ನಿಯೋಗದಲ್ಲಿದ್ದರು.