ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮನೆ ಊಟಕ್ಕಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆದರೆ, ಈ ಬಾರಿ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಈ ಹಿಂದೆ ಮನೆ ಊಟ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದು ಅಲ್ಲಿ ವಜಾ ಆಗಿತ್ತು. ನಂತರ ತಾಂತ್ರಿಕ ಕಾರಣ ನೀಡಿ ವಕೀಲರು ದರ್ಶನ್ ರ ಅರ್ಜಿಯನ್ನು ಹಿಂಪಡೆದಿದ್ದರು. ಈಗ ದರ್ಶನ್ ಮತ್ತೊಮ್ಮೆ ಮನೆ ಊಟಕ್ಕಾಗಿ ಮನವಿ ಮಾಡಿದ್ದಾರೆ.
ಈ ಬಾರಿ ಜೈಲಧಿಕಾರಿಗಳಿಗೆ ಮತ್ತು ಜೈಲಿನ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಜೈಲು ವೈದ್ಯಾಧಿಕಾರಿ, ಕಾರಾಗೃಹ ಎಡಿಜಿಪಿಗೆ ಪತ್ರ ಬರೆದಿರುವ ನಟ ದರ್ಶನ್, ತಮಗೆ ಮನೆ ಊಟ ತರಿಸಿಕೊಳ್ಳಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ನಾನು ದಿನನಿತ್ಯ ನನ್ನ ಮನೆಯಲ್ಲಿದ್ದಾಗ ವ್ಯಾಯಾಮ ಮಾಡುತ್ತಿದ್ದೆ ಅದರ ಜೊತೆ ಪೌಷ್ಟಿಕ (ಪ್ರೋಟಿನ್ ) ಆಹಾರ ಸೇವಿಸುತ್ತಿದ್ದೆ ಮತ್ತು ದಿನನಿತ್ಯ ಪೌಷಷ್ಟಿಕ ಆಹಾರ ತಿನ್ನುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರ ಕೊರತೆ ಇದ್ದು ನನ್ನ ದೇಹದ ತೂಕದಲ್ಲಿ ಸುಮಾರು ಹತ್ತು ಕೆ.ಜಿ ಯಷ್ಟು ಇಳಿಕೆಯಾಗಿದೆ. ಹೀಗಾಗಿ ದಯಮಾಡಿ ನನಗೆ ಮನೆ ಊಟದ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ನಟ ದರ್ಶನ್. ಜೈಲು ವೈದ್ಯಾಧಿಕಾರಿಗಳು ಜಾಗೂ ಜೈಲು ಮಹಾ ನಿರ್ದೇಶಕರನ್ನು ಉದ್ದೇಶಿಸಿ ಈ ಪತ್ರ ಬರೆದಿದ್ದಾರೆ.
ಕಳೆದ ಬಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದರಿಂದಲೇ ಈಗ ಹೊಸ ಅರ್ಜಿ ಸಲ್ಲಿಸಲೆಂದು ವಕೀಲರ ಸಲಹೆ ಪಡೆದು ಈ ಬಾರಿ ದರ್ಶನ್ ಮೊದಲಿಗೆ ಜೈಲು ಅಧಿಕಾರಿಗಳು ಹಾಗೂ ಜೈಲು ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ