ಬೆಂಗಳೂರು: ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ ಎಂದು ಜೈಲಿನಲ್ಲಿರುವ ಆರೋಪಿ ದರ್ಶನ್ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ (Darshan) ಈ ರೀತಿ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ದರ್ಶನ್ ಜೈಲಿನೊಳಗಿನಿಂದಲೇ ಜೈಲಾಧಿಕಾರಿಗಳ ಮೂಲಕ ಈ ರೀತಿ ಸಂದೇಶ ನೀಡಿದ್ದಾರೆ. ಯಾರೂ ಜೈಲಿಗೆ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಯಾರು ಕೂಡ ಜೈಲಿನ ಹತ್ತಿರ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ನನ್ನನ್ನು ಭೇಟಿ ಮಾಡಲು ಅಧಿಕಾರಿಗಳು ಅವಕಾಶ ನೀಡುವುದಿಲ್ಲ. ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ಮರಳಿ ಹೋಗುವುದು ಬೇಡ. ಅದರಲ್ಲಿಯೂ ವಿಶೇಷಚೇತನ ಯುವತಿ ಸೌಮ್ಯಾ ಭೇಟಿಗೆ ಬಂದಿದ್ದು ಬೇಸರ ತಂದಿದೆ ಎಂದು ಹೇಳಿದ್ದಾರೆ. ದರ್ಶನ್ ಭೇಟಿಗೆ ಬಂದಿದ್ದ ಸೌಮ್ಯ ಅನ್ನ, ಆಹಾರ ಸೇವಿಸದೇ ಹಠ ಹಿಡಿದಿದ್ದರು. ನಟ ದರ್ಶನ್ ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದ್ದರು. ಹೀಗಾಗಿ ಈ ರೀತಿ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದ ಕಂಬಿಯ ಹಿಂದೆ ಇದ್ದಾರೆ. ನಟ ದರ್ಶನ್ ಸೆರೆವಾಸ 7ನೇ ದಿನಕ್ಕೆ ಕಾಲಿಟ್ಟಿದೆ.
ಗುರುವಾರ ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಸೇವಿಸಿ ತಡವಾಗಿ ದರ್ಶನ್ ನಿದ್ರೆಗೆ ಜಾರಿದ್ದಾರೆ. ಬೆಳಿಗ್ಗೆ 6ಕ್ಕೆ ಎದ್ದಿದ್ದಾರೆ. ಎಂದಿನಂತೆ ಬಿಸಿ ನೀರು ಸೇವಿಸಿ, ಕೊಠಡಿಯಲ್ಲಿಯೇ ವಾಕಿಂಗ್ ಮಾಡಿದ್ದಾರೆ.