ಬೆಂಗಳೂರು: ಮನೆಯೊಂದು ಮೂರು ಬಾಗಿಲಿನಂತಾಗಿರುವ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ರಾಜಕೀಯ ಗರಿಗೆದರಿದೆ. ಗುಪ್ತಗಾಮಿನಿಯಂತಿದ್ದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಈಗಾಗಲೇ ದೆಹಲಿ ಅಂಗಳದಲ್ಲೂ ಸದ್ದು ಮಾಡುತ್ತಿದೆ. ಶತಾಯಗತಾಯ ಡಿ.ಕೆ. ಶಿವಕುಮಾರ್ ರನ್ನು ಪಟ್ಟದಿಂದ ಕೆಳಗಿಳಿಸಿ ಹೊಸಬರನ್ನು ನೇಮಿಸುವಂತೆ ದೆಹಲಿ ಕಲಿಗಳ ಮೇಲೂ ಒತ್ತಡ ಹೇರಲಾಗುತ್ತಿದೆ. ಅದರಲ್ಲೂ ಎಐಸಿಸಿ ಅಧ್ಯಕ್ಷರೂ ಕನ್ನಡಿಗರೇ ಆಗಿರುವುದರಿಂದ ರಾಜ್ಯ ನಾಯಕರಿಗೆ ಖರ್ಗೆ ಮನೆ ಬಾಗಿಲು ಸದಾ ತೆರೆದೇ ಇದೆ. ಈ ಸ್ವಾತಂತ್ರವನ್ನೇ ಬಳಸಿಕೊಂಡು ಹಲವು ನಾಯಕರು ಈಗಾಗಲೇ ದೆಹಲಿ ವಿಮಾನ ಏರುತ್ತಲೇ ಇದ್ದಾರೆ. ಈಗ ಮತ್ತೆ ಬದಲಾವಣೆಯ ಕೂಗು ಕೇಳಿ ಬರುತ್ತಿದೆ.

ಹುದ್ದೆ ಬಿಟ್ಟುಕೊಡಲೊಪ್ಪದ ಡಿ.ಕೆ. ಶಿವಕುಮಾರ್!
ಹಾಗೆ ನೋಡಿದರೆ, ಈ ಹೊತ್ತಿಗಾಗಲೇ ಕೆಪಿಸಿಸಿಗೆ ನೂತನ ಸಾರಥಿ ಆಯ್ಕೆಯಾಗಿ ಜಮಾನ ಕಳೆಯಬೇಕಿತ್ತು. ಬಟ್ ಅಲ್ಲಿ ಕೂತಿರುವುದು ಕನಕಪುರ ಬಂಡೆ. ಅಷ್ಟು ಸುಲಭಕ್ಕೆ ಕುರ್ಚಿ ಬಿಟ್ಟುಕೊಡಲೊಪ್ಪದ ಡಿಕೆ ನಾನೇ ಬಾಸ್ ಅಂತಿದ್ದಾರೆ. ಅಷ್ಟೇ ಅಲ್ಲಾ ಸಿಎಂ ಕುರ್ಚಿಗೆ ಏರಬೇಕು. ಕೆಪಿಸಿಸಿ ಕುರ್ಚಿ ಬಿಡಬೇಕು ಅನ್ನೋ ಅಲಿಖಿತ ಶರಾ ಹೊರಡಿಸಿದ್ದಾರೆ. ಈ ನಡುವೆ, ಡಿಕೆ ಬದಲು ತಮ್ಮ ಬಣದ ನಿಷ್ಠನನ್ನು ಕೆಪಿಸಿಸಿಗೆ ತರಬೇಕು ಅಂತಾ ಸಿದ್ದರಾಮಯ್ಯ ಬಣ ಇನ್ನಿಲ್ಲದ ಕಸರತ್ತು ನಡೆಸಿದೆ. ಮೊನ್ನೆ ಕೂಡಾ ಸಿದ್ದು-ಡಿಕೆ ಇಬ್ಬರೂ ದೆಹಲಿಗೆ ಹೋಗಿದ್ದಲ್ಲದೆ ಕೆಪಿಸಿಸಿ ವಿಚಾರದಲ್ಲಿ ಉಭಯ ನಾಯಕರು ತಮ್ಮದೇ ಆದ ವಾದವನ್ನು ವರಿಷ್ಠರ ಮುಂದಿಟ್ಟು ಬಂದಿದ್ದಾರೆ.

ಈಶ್ವರ್ ಖಂಡ್ರೆ ವರಿಷ್ಠರ ನೀಲಿಗಣ್ಣಿನ ನಾಯಕ!
ಬದಲಾವಣೆ ಅನಿವಾರ್ಯ ಎನ್ನುವುದು ಸತ್ಯ. ದೆಹಲಿ ಮುಖಂಡರಿಗೂ ಇದು ಮನವರಿಕೆಯಾಗಿದೆ. ಆದರೆ, ಪರಿಸ್ಥಿತಿಯನ್ನು ಹದ ಮಾಡಿಕೊಂಡು ನಿರ್ಧಾರ ಘೋಷಿಸುವ ಸಂಕಷ್ಟ ಹೈಕಮಾಂಡ್ ಗಿದೆ. ಈಗಾಗಲೇ ಹಲವು ಅತಿರಥ ನಾಯಕರು ಕೆಪಿಸಿಸಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಸತೀಶ್ ಜಾರಕಿಹೊಳಿ ನನಗೊಂದು ಚಾನ್ಸ್ ಕೊಡಿ ಅಂತಾ ಖರ್ಗೆ ಮುಂದೆ ಡಿಮ್ಯಾಂಡ್ ಮಾಡಿದ್ದಾರೆ. ಪ್ರಬಲ ವಾಲ್ಮೀಕಿ ಸಮುದಾಯದ ನಾಯಕರಾಗಿರುವ ಸತೀಶ್ ಹಿಡಿದ ಪಟ್ಟು ಸಾಧಿಸಿ ಗೆಲ್ಲೋ ತಾಕತ್ತಿನ ನಾಯಕ. ಆದರೆ, ಡಿಕೆ ಗ್ಯಾಂಗ್ ಗೆ ಮಾತ್ರ ಸತೀಶ್ ಪಟ್ಟಾಭಿಷೇಕ ಸುತಾರಂ ಇಷ್ಟ ಇಲ್ಲ. ಹೀಗಾಗಿ ಅನಿವಾರ್ಯ ಸಂದರ್ಭ ಬಂದರೆ, ತಟಸ್ಥ ನಾಯಕನ ಪರ ಬ್ಯಾಟ್ ಬೀಸುವ ಪ್ಲ್ಯಾನ್ ಮಾಡುತ್ತಿದೆ. ಈ ಹಿಂದೆ ಡಿಕೆ ಸುರೇಶ್ ರನ್ನು ಕೆಪಿಸಿಸಿಗೆ ತರಬೇಕು ಎಂಬ ಲೆಕ್ಕ ಸಹೋದರನಿಗಿತ್ತು. ಆದರೆ ಒಂದೇ ಕುಟುಂಬಕ್ಕೆ ಪದೇಪದೆ ಸ್ಥಾನಮಾನ ಸೂಕ್ತವಲ್ಲ ಎಂದು ಹೈಕಮಾಂಡ್ ಕಡ್ಡಿ ಮುರಿದಂತೆ ಹೇಳಿದೆ.
ಹಾಗಂತಾ ಡಿಕೆ ಬಣದಲ್ಲಿ ಪಕ್ಷದ ಹುದ್ದೆ ನಿಭಾಯಿಸುವ ಗಟ್ಟಿಗ ನಾಯಕರ ಕೊರತೆ ಇದೆ ತಟಸ್ಥ ನಾಯಕನ ಪರ ಬ್ಯಾಟ್ ಬೀಸುವ ಹುಮ್ಮಸ್ಸು ಕೂಡ ಶಿವಕುಮಾರ್ ಟೀಂಗಿದೆ. ಇದರ ಫಲವೇ ಎನ್ನುವಂತೆ ಈಶ್ವರ್ ಖಂಡ್ರೆಗೆ ಜಾಕ್ ಪಾಟ್ ಹೊಡೆಯೋ ಸಾಧ್ಯತೆಗಳಿವೆ. ಅಷ್ಟಕ್ಕೂ ಖಂಡ್ರೆ ವರಿಷ್ಠರ ಪಾಲಿನ ನೀಲಿಗಣ್ಣಿನ ನಾಯಕನೂ ಹೌದು.

ಖಂಡ್ರೆ ಆಯ್ಕೆ ಹಿಂದಿನ ಗಣಿತ ಹೇಗಿದೆ?
ಈಶ್ವರ್ ಖಂಡ್ರೆ ಪ್ರಬಲ ಲಿಂಗಾಯತ ಸಮುದಾಯದ ಮುಖಂಡ ಅನ್ನೋದು ಪ್ಲಸ್ ಪಾಯಿಂಟ್. ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಇನ್ನು ಅವರ ತಂದೆ ಭೀಮಣ್ಣ ಖಂಡ್ರೆಗಿರುವ ಉತ್ತಮ ಹೆಸರು ಪಕ್ಷಕ್ಕೆ ವರವಾಗಬಹುದು. ಈಶ್ವರ್ ಖಂಡ್ರೆ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮಾಜದ ಮತಗಳನ್ನು ಸೆಳೆಯಬಹುದು. ಸಾಲದ್ದಕ್ಕೆ ಖಂಡ್ರೆ ನಿಜಕ್ಕೂ ಪಕ್ಷ ನಿಷ್ಠ ಮತ್ತು ಹೈಕಮಾಂಡ್ ಗೆ ಬದ್ಧ ನಾಯಕ. ವಿವಾದ ರಹಿತ ರಾಜಕಾರಣಿ ಹಾಗೂ ಸಿದ್ದು-ಡಿಕೆ ಬಣಗಳನ್ನು ನಿಭಾಯಿಸಿಕೊಂಡು ಹೋಗುವಂತಹ ಜಾಣ ರಾಜಕಾರಣಿ. ಹೀಗಾಗಿ ಖಂಡ್ರೆಗೆ ಪಟ್ಟ ಓಲಿಯೋ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಇತ್ತೀಚೆಗಷ್ಟೇ ಪುತ್ರ ಸಾಗರ್ ಖಂಡ್ರೆ ಜೊತೆ ವೇಣುಗೋಪಾಲ್ ರನ್ನ ಭೇಟಿ ಮಾಡಿ ಚರ್ಚಿಸಿರುವುದು ಒಳಗೊಳಗೇ ಏನೋ ನಡೆಯುತ್ತಿದೆ ಅನ್ನುವುದನ್ನು ಗೌಪ್ಯವಾಗಿಟ್ಟಿಲ್ಲ.
