ಬೆಂಗಳೂರು : ಸಿಲಿಂಡರ್ ಸ್ಫೋಟಗೊಂಡು ಮಾಜಿ ಸೈನಿಕರೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಗರದ ಅಂದ್ರಹಳ್ಳಿ ಸಮೀಪದ ಬ್ಯಾಡರಹಳ್ಳಿಯ ವಿದ್ಯಾಮಾನ್ಯನಗರದಲ್ಲಿ ನಡೆದಿದೆ.
ಮಾಜಿ ಸೈನಿಕ ಜನಾರ್ದನ್ ಅವರು ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಜನಾರ್ದನ್ ಅವರು ವಾಸವಿದ್ದ ಮನೆಯಲ್ಲಿ ನಿನ್ನೆ ರಾತ್ರಿ ಸಿಲಿಂಡರ್ ಸೋರಿಕೆಯಾಗಿತ್ತು. ಇಂದು ಬೆಳಗ್ಗೆ ಜನಾರ್ದನ್ ಲೈಟ್ ಸ್ವಿಚ್ ಹಾಕುತ್ತಿದ್ದಂತೆ ಅನಿಲದ ಒತ್ತಡಕ್ಕೆ ಸಿಲಿಂಡರ್ ಸ್ಫೋಟಗೊಂಡಿದೆ. ಬ್ಲಾಸ್ಟ್ನ ತೀವ್ರತೆಗೆ ಇಡೀ ಮನೆಯ ಗೋಡೆಗಳು ನುಚ್ಚು ನೂರಾಗಿದೆ. ಸಿಲಿಂಡರ್ ಸ್ಫೋಟದ ಪರಿಣಾಮದಿಂದ ಮನೆ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿದಿದ್ದು, ಅಪಾರ ಹಾನಿಯಾಗಿದೆ.
ಇನ್ನು ಈ ಘಟನೆಯಲ್ಲಿ ಜನಾರ್ದನ್ ಸ್ಥಿತಿ ಗಂಭೀರವಾಗಿದ್ದು, ಸದ್ಯ ಮಾಜಿ ಸೈನಿಕ ಜನಾರ್ದನ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ. ರುದ್ರೇಗೌಡ ಎಂಬುವವರು ಈ ಮನೆಯನ್ನು ನಿವೃತ್ತ ಯೋಧರಿಗೆ ಬಾಡಿಗೆಗೆ ನೀಡಿದ್ದರು, ಕಳೆದ 15 ವರ್ಷಗಳಿಂದ ಯೋಧರು ಈ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.