ಬೆಳಗಾವಿ: ವಿಪ ಸದಸ್ಯ ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ (Khanapur) ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ರನ್ನು ಅಮಾನತು ಮಾಡಿ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಆದೇಶ ಹೊರಡಿಸಿದ್ದಾರೆ.
ಸಿ.ಟಿ.ರವಿಯನ್ನು ಹಿರೇಬಾಗೇವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆದುಕೊಂಡು ಬಂದ ವೇಳೆ ಠಾಣೆಯ ಸಿಬ್ಬಂದಿಯನ್ನಿಟ್ಟುಕೊಂಡು ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಅಲ್ಲದೇ ಆಪಾದಿತರನ್ನು ಹೊರತುಪಡಿಸಿ ಯಾರನ್ನೂ ಒಳ ಬೀಡದಂತೆ ಆದೇಶಿಸಲಾಗಿತ್ತು.
ಆದರೆ, ಸಿಪಿಐ ಮಂಜುನಾಥ್ ನಾಯಕ್ ಸೂಕ್ತ ಬಂದೋಬಸ್ತ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆ ವೇಳೆ ರಾಜಕೀಯ ಮುಖಂಡರು ಖಾನಾಪುರ ಠಾಣೆ ಒಳಗೆ ನುಗ್ಗಿ ಬಂದಿದ್ದರು. ಇದರಿಂದ ಠಾಣೆಯೊಳಗೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಜಕೀಯ ಮುಖಂಡರನ್ನು ತಡೆಯುವಲ್ಲಿ ವಿಫಲರಾಗಿದ್ದರು. ಮೇಲಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಕರ್ತವ್ಯ ಲೋಪ, ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಈ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ, ಜೆಡಿಎಸ್, ದಲಿತ ಪರ, ಕನ್ನಡ ಪರ ಸಂಘಟನೆಗಳು ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಖಾನಾಪುರ ಪಟ್ಟಣ ಬಂದ್ ಗೆ ಕರೆ ನೀಡಿವೆ.