ಬೆಂಗಳೂರು : ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಅವರ ಆಟ ನೋಡಲು 10,000ಕ್ಕೂ ಹೆಚ್ಚು ಜನ ಸೇರಿದ್ದರೆ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೃಶ್ಯ ತದ್ವಿರುದ್ಧವಾಗಿತ್ತು. ಮೈದಾನದ ಒಳಗೆ ಪ್ರವೇಶವಿಲ್ಲದಿದ್ದರೇನಂತೆ, ನಮ್ಮ ನೆಚ್ಚಿನ ಆಟಗಾರನನ್ನು ನೋಡೇ ತೀರುತ್ತೇವೆ ಎಂದು ಪಣತೊಟ್ಟ ಅಭಿಮಾನಿಗಳು ಮರ, ಲಾರಿ, ಕಂಪೌಂಡ್ ಏರಿ ಸಾಹಸ ಮೆರೆದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದರು. ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (BCCI Centre of Excellence) ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಕ್ರೀಡಾಂಗಣದ ಒಳಗೆ ಪ್ರವೇಶ ನಿರಾಕರಿಸಲಾಗಿತ್ತು.
ಮರವೇರಿದ ಅಭಿಮಾನಿ, ವೈರಲ್ ಆಯ್ತು ವಿಡಿಯೋ
ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಂಡುಕೊಂಡ ದಾರಿ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಮೈದಾನದ ಸುತ್ತಲೂ ಇರುವ ಎತ್ತರದ ಕಂಪೌಂಡ್ ಗೋಡೆಗಳ ಹಿಂದೆ ನಿಂತು ಇಣುಕಿ ನೋಡಿದರು. ಅಷ್ಟೇ ಅಲ್ಲದೆ, ರಸ್ತೆ ಬದಿ ನಿಲ್ಲಿಸಿದ್ದ ಲಾರಿಗಳ ಮೇಲೆ ಹತ್ತಿ ನಿಂತರು. ಕೆಲವರಂತೂ ಮೈದಾನದ ಪಕ್ಕದಲ್ಲಿದ್ದ ಮರಗಳನ್ನು ಏರಿ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸುವ ಸಾಹಸ ಮಾಡಿದರು.
ಮರವೇರಿ ಕುಳಿತ ಅಭಿಮಾನಿಯೊಬ್ಬರ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಹ್ಲಿಗಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ದೆಹಲಿ ತಂಡದ ಬಸ್ ಬರುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮ ‘ಕೊಹ್ಲಿ.. ಕೊಹ್ಲಿ..’ ಎಂದು ಘೋಷಣೆ ಕೂಗಿ ಸಂಭ್ರಮಿಸಿತು.
16 ಸಾವಿರ ರನ್ ಸರದಾರ ಕೊಹ್ಲಿ
ಅಭಿಮಾನಿಗಳ ಈ ಪ್ರೀತಿಗೆ ವಿರಾಟ್ ಕೊಹ್ಲಿ ನಿರಾಸೆ ಮಾಡಲಿಲ್ಲ. ಮೈದಾನದಲ್ಲಿ ಅಬ್ಬರಿಸಿದ ಅವರು, ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ 131 ರನ್ ಬಾರಿಸುವ ಮೂಲಕ ದೆಹಲಿ ತಂಡಕ್ಕೆ 4 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ಟರು. ಈ ಇನ್ನಿಂಗ್ಸ್ ಮೂಲಕ ಕೊಹ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು. ತಮ್ಮ 343ನೇ ಪಂದ್ಯದಲ್ಲಿ ಲಿಸ್ಟ್ ‘ಎ’ ಕ್ರಿಕೆಟ್ನಲ್ಲಿ (50 ಓವರ್ಗಳ ಮಾದರಿ) 16,000 ರನ್ಗಳನ್ನು ಪೂರೈಸಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮತ್ತು ವಿಶ್ವದ 9ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.
ಶತಕಗಳ ಸುರಿಮಳೆ: ಒಂದೇ ದಿನ 22 ಸೆಂಚುರಿ!
ಬುಧವಾರ ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಯಿತು. ಟೂರ್ನಿಯ ಮೊದಲ ದಿನವೇ ಬರೋಬ್ಬರಿ 22 ಶತಕಗಳು ದಾಖಲಾದವು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಸೇರಿದಂತೆ ಒಟ್ಟು 22 ಆಟಗಾರರು ಶತಕ ಸಿಡಿಸಿ ಮಿಂಚಿದರು. 2021 ಮತ್ತು 2025ರಲ್ಲಿ ತಲಾ 19 ಶತಕಗಳು ದಾಖಲಾಗಿದ್ದೇ ಈವರೆಗಿನ ಗರಿಷ್ಠವಾಗಿತ್ತು.
ಇದನ್ನೂ ಓದಿ : ಬೆಂಗಳೂರು | ಹನಿಮೂನ್ನಿಂದ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆಗೆ ಯತ್ನ.. ಕಾರಣವೇನು?


















