ಬೆಂಗಳೂರು: ವ್ಯಕ್ತಿಯೊಬ್ಬನಿಗೆ ಪ್ರೇಯಸಿ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.
ಜೋಡಿ ಕೊಲೆ ಮಾಡಿದ್ದ ಆರೋಪಿ ಶೇಖಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಸಿಸಿಹೆಚ್ – 51 ರ ನ್ಯಾಯಧೀಶ ಸಂತೋಷ್ ಆದೇಶ ಹೊರಡಿಸಿದ್ದಾರೆ. ಈ ಘಟನೆ 2023ರಲ್ಲಿ ನಡೆದಿತ್ತು. ಬಾಗಲಗುಂಟೆ ಠಾಣಾ ವ್ಯಾಪ್ತಿಯ ಟಿ.ದಾರಸರಹಳ್ಳಿ ಹತ್ತಿರ ಈ ಜೋಡಿ ಕೊಲೆ ನಡೆದಿತ್ತು. ನವನೀತ ಹಾಗೂ ಮಹಿಳೆಯ 11 ವರ್ಷದ ಮಗ ಸಾಯಿಸೃಜನ್ ಕೊಲೆಯಾಗಿದ್ದರು.
ಗಂಡನಿಂದ ಬೇರ್ಪಟ್ಟು ಇಬ್ಬರ ಮಕ್ಕಳ ಜೊತೆ ಮಹಿಳೆ ನವನೀತ ವಾಸವಾಗಿದ್ದರು. ಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ ಶೇಖಪ್ಪನಿಗೆ ನವನೀತ ಪರಿಚಯವಾಗಿದ್ದಳು. ಇಬ್ಬರೂ ಸಲುಗೆಯಿಂದ ಇದ್ದರು. ಆದರೆ, ಮಹಿಳೆ ಬೇರೊಬ್ಬರೊಂದಿಗೆ ಓಡಾಡುತ್ತಿದ್ದದ್ದನ್ನು ನೋಡಿದ್ದ ಶೇಖಪ್ಪ ಗಲಾಟೆ ಮಾಡಿದ್ದ. ನಂತರ ಕೋಪದಲ್ಲಿ ಭರದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಇದನ್ನು ನೋಡಿದ್ದ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಎನ್ನಲಾಗಿದೆ.
ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿತ್ತು. ಚಾರ್ಜ್ಶೀಟ್ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಟ್ರಯಲ್ ನಡೆಸಲಾಗಿತ್ತು.