ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯವು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಹೀಗಾಗಿ ಸಿಎಂಗೆ ಸಂಕಷ್ಟ ಶುರುವಾದಂತಾಗಿದೆ. ಈ ವಿಷಯವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೈಕೋರ್ಟ್ 17ಎ ಅನ್ವಯ ತನಿಖೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್ ಆದೇಶದ ನಂತರ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿದೆ. ತೀರ್ಪಿನ ಪ್ರತಿ ಸಿಕ್ಕಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ತನಿಖೆ ಎದುರಿಸಲು ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ. ತನಿಖೆ ಎದುರಿಸುತ್ತೇನೆ. ಆದರೆ, ಸದ್ಯ ಕೊಟ್ಟಿರುವ ಆದೇಶವನ್ನು ನಾನು ಓದಿಲ್ಲ. ಕೇರಳದಿಂದ ಬಂದ ಮೇಲೆ ಆದೇಶದಲ್ಲಿ ಏನಿದೆ ನೋಡುತ್ತೇನೆ. ಕೋರ್ಟ್ ಆದೇಶ ಸಿಕ್ಕಿದ ಮೇಲೆ ವಕೀಲರ ಜತೆ ಚರ್ಚಿಸುತ್ತೇನೆ. ಆನಂತರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ನಾವು ರಚಿಸಿರುವ ತನಿಖಾ ಆಯೋಗಕ್ಕೆ ಕೋರ್ಟ್ ತಡೆ ನೀಡಿಲ್ಲ. ಸಂಪೂರ್ಣವಾಗಿ ಆದೇಶ ಓದಿದ ಮೇಲೆ ನಾಳೆ ಪ್ರತಿಕ್ರಿಯೆ ನೀಡುತ್ತೇನೆ. ನಿನ್ನೆಯೂ ನಾನು ಹೇಳಿದ್ದೇನೆ, ಈಗಲೂ ಪುನರುಚ್ಚರಿಸುತ್ತಿದ್ದೇನೆ. ತನಿಖೆಗೆ ನಾನು ಹೆದರುವುದಿಲ್ಲ. ದೂರುದಾರರು ಮೈಸೂರಿನವರು. ಹೀಗಾಗಿ ಅಲ್ಲೇ ತನಿಖೆ ಆಗುತ್ತದೆ. ಮುಂದಿನ ನಿರ್ಧಾರದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.