ಬೀದರ್: ಮಂಗಳೂರು ಕೋಮು ಸಂಘರ್ಷ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಮೈ ಪರಚಿಕೊಂಡರಂತೆ ಎಂಬ ಗಾದೆ ಮಾತಿನಂತೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಭಾರೀ ಸುಲಭ. ಆದರೆ, ಅದನ್ನು ನಿಭಾಯಿಸಿಕೊಂಡು ಹೋಗುವುದು ತುಂಬಾ ಕಷ್ಟ. ನಮ್ಮ ಆಡಳಿತ ಅವಧಿಯಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇರಲಿಲ್ವಾ? ಎಲ್ಲ ಸಮುದಾಯದವರೂ ಇದ್ದರು. ಆದರೆ, ನಾವು ಈ ರೀತಿ ಸಣ್ಣತನದಿಂದ ನಡೆದುಕೊಳ್ಳತಿರಲಿಲ್ಲ ಎಂದು ಗುಡುಗಿದ್ದಾರೆ.
ಆದರೆ, ಈ ಸರ್ಕಾರ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕೆಲವರನ್ನು ಜೀವಂತ ಕತ್ತಲೆ ಕೋಣೆಯಲ್ಲಿ ಇಡಲಾಗುತ್ತಿದೆ. ಪಕ್ಷ, ಸರ್ಕಾರ ಮರೆತು ನೆಮ್ಮದಿಯಿಂದ ಬದುಕುವುದನ್ನ ಕಲಿಯಿರಿ. ಮಂಗಳೂರಿನಲ್ಲಿ ಕೇವಲ ಮುಸ್ಲಿಂರಿಲ್ಲ. ಹಿಂದೂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಬಿಜೆಪಿ ಸರ್ಕಾರ ನಡೆದುಕೊಂಡಂತೆ ಕಾಂಗ್ರೆಸ್ ಕೂಡ ಎಲ್ಲರೂ ಒಂದೇ ಎಂಬಂತೆ ನಡೆದುಕೊಳ್ಳಬೇಕಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಕಳ್ಳರು, ಸುಲಿಗೆಕೋರರನ್ನು ಬೆಳೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಗೃಹ ಸಚಿವರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಗೃಹ ಸಚಿವರು ಒಳ್ಳೆಯವರು. ಆದರೆ, ಅವರನ್ನು ಯಾವ ರೀತಿ ಕಟ್ಟಿ ಹಾಕಿದ್ದಾರೋ ಗೊತ್ತಿಲ್ಲ ಎಂದು ಗುಡುಗಿದ್ದಾರೆ. ನಮ್ಮಿಬ್ಬರ ಮಧ್ಯೆ 50 ವರ್ಷಗಳ ಸ್ನೇಹವಿದೆ. ಅವರಿಗೆ ಇನ್ನೂ ಸ್ವಲ್ಪ ಸೈಕಲ್ ಪಂಪ್ ಹೊಡೆಯಬೇಕು. ಪರಮೇಶ್ವರ್ ಅನುಭವಿಗಳು, ಅದರಿಂದಾಚೆ ಬರಬೇಕು ಎಂದಿದ್ದಾರೆ.