ನವದೆಹಲಿ: ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಹೆಚ್ಚುತ್ತಿರುವ ಬಿರುಕಿಗೆ ದಿನೇ ದಿನೇ ಹೊಸ ಸಾಕ್ಷಿಗಳು ಸಿಗಲಾರಂಭಿಸಿವೆ. ಪಹಲ್ಗಾಮ್ ದಾಳಿ, ಭಾರತ-ಪಾಕ್ ಸಂಘರ್ಷ ಸೇರಿದಂತೆ ಪಾಕಿಸ್ತಾನದ ದುಷ್ಟತನ ವಿರುದ್ಧ ವಿವಿಧ ದೇಶಗಳಿಗೆ ಮಾಹಿತಿ ನೀಡಲೆಂದು ಸರ್ವಪಕ್ಷ ನಿಯೋಗ ತೆರಳಲಿದೆ. ಈ ನಿಯೋಗದಲ್ಲಿ ತೆರಳಲಿರುವ ತನ್ನ ಪಕ್ಷದ ಸಂಸದರ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದ್ದು, ಅದರಲ್ಲಿ ತರೂರ್ ಹೆಸರನ್ನು ಸೇರ್ಪಡೆಗೊಳಿಸಿಲ್ಲ. ತರೂರ್ ಹೆಸರನ್ನು ಕೈಬಿಡುವ ಮೂಲಕ ಕಾಂಗ್ರೆಸ್ ತನ್ನದೇ ಸಂಸದನ ವಿರುದ್ಧದ ಅಸಮಾಧಾನವನ್ನು ಹೊರಹಾಕಿದೆ.
ಇದೇ ವೇಳೆ, ಪಕ್ಷದ ಪಟ್ಟಿಯಲ್ಲಿ ಹೆಸರು ಇರದ ಹೊರತಾಗಿಯೂ ಶಶಿ ತರೂರ್ ಅವರನ್ನು ನಿಯೋಗವೊಂದರ ನೇತೃತ್ವ ವಹಿಸುವಂತೆ ಕೇಂದ್ರ ಸರ್ಕಾರವೇ ಕೋರಿಕೊಂಡಿದ್ದು, ಅವರು ಹೋಗಲು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯು ತರೂರ್ ಕಾಂಗ್ರೆಸ್ನಿಂದ ದೂರವಾಗುತ್ತಿರುವ ಮತ್ತು ಬಿಜೆಪಿಗೆ ಹತ್ತಿರವಾಗುತ್ತಿರುವ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.
ಶುಕ್ರವಾರ ಮುಂಜಾನೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ನಾಯಕತ್ವವನ್ನು ಸಂಪರ್ಕಿಸಿ, ನಿಯೋಗದಲ್ಲಿ ತೆರಳಲು 4 ಸಂಸದರ ಹೆಸರುಗಳನ್ನು ಸೂಚಿಸುವಂತೆ ಮನವಿ ಮಾಡಿದ್ದರು. ಅದರಂತೆ, ಮಧ್ಯಾಹ್ನದ ವೇಳೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 4 ಹೆಸರುಗಳನ್ನು ಪಟ್ಟಿಯಲ್ಲಿ ಸಲ್ಲಿಸಿದ್ದು, ಅದರಲ್ಲಿ ತರೂರ್ ಹೆಸರು ಇರಲಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಪಟ್ಟಿಯಲ್ಲಿ ಮಾಜಿ ಸಚಿವ ಆನಂದ್ ಶರ್ಮಾ, ಲೋಕಸಭೆ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೋಯಿ, ರಾಜ್ಯಸಭಾ ಸಂಸದ ಡಾ. ಸೈಯದ್ ನಸೀರ್ ಹುಸೇನ್, ಲೋಕಸಭೆ ಸಂಸದ ರಾಜಾ ಬ್ರಾರ್ ಹೆಸರುಗಳಿವೆ.
ಇದೇ ವೇಳೆ, ಸಂಸದೀಯ ವ್ಯವಹಾರಗಳ ಸಚಿವಾಲಯವು ತಿರುವನಂತಪುರಂ 4 ಬಾರಿಯ ಸಂಸದ ಶಶಿ ತರೂರ್ ಅವರು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿದೆ. ನಿಯೋಗದಲ್ಲಿ ತೆರಳಲಿರುವ ಇತರೆ ಸದಸ್ಯರೆಂದರೆ ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್, ಬೈಜಯಂತ ಪಾಂಡಾ, ಜೆಡಿಯು ಸಂಸದ ಸಂಜಯ್ ಕುಮಾರ್ ಜಾ, ಡಿಎಂಕೆ ನಾಯಕಿ ಕನಿಮೋಳಿ, ಎನ್ ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಮತ್ತು ಶಿವಸೇನೆ(ಶಿಂಧೆ ಬಣ) ಸಂಸದ ಶ್ರೀಕಾಂತ್ ಶಿಂದೆ.
7 ಸದಸ್ಯರ ಈ ನಿಯೋವು ಮೇ 23ರಿಂದ 10 ದಿನಗಳ ಕಾಲ ರಾಜತಾಂತ್ರಿಕ ಪ್ರವಾಸ ಕೈಗೊಳ್ಳಲಿದೆ. ವಾಷಿಂಗ್ಟನ್, ಲಂಡನ್, ಅಬುಧಾಬಿ, ಪ್ರಿಟೋರಿಯಾ ಮತ್ತು ಟೋಕಿಯೋಗೆ ತೆರಳಲಿದೆ. ಪ್ರತಿಯೊಂದು ತಂಡವೂ ಭಯೋತ್ಪಾದನೆ ವಿಚಾರದಲ್ಲಿ ಭಾರತದ ಶೂನ್ಯ ಸಹಿಷ್ಣುತೆ ಬಗ್ಗೆ ತಿಳಿಸಿ ಹೇಳಲಿದೆ. ಜತೆಗೆ ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತೂ ಮಾಹಿತಿ ನೀಡಲಿದೆ.
ಇದೇ ವೇಳೆ ಕೇಂದ್ರ ಸರ್ಕಾರ ನೀಡಿರುವ ಈ ಜವಾಬ್ದಾರಿ ಕುರಿತು ಪ್ರತಿಕ್ರಿಯಿಸಿರುವ ಶಶಿ ತರೂರ್, ಕೇಂದ್ರ ಸರ್ಕಾರದ ಈ ಆಹ್ವಾನಕ್ಕೆ ನಾನು ಆಭಾರಿಯಾಗಿದ್ದೇನೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ನಾನು ಬೇರೇನೂ ಯೋಚಿಸಲ್ಲ ಎಂದಿದ್ದಾರೆ.
ಭಾರತ-ಪಾಕ್ ಸಂಘರ್ಷ, ಅದಕ್ಕೆ ಕೇಂದ್ರ ಸರ್ಕಾರ, ಸೇನೆ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಇತ್ತೀಚೆಗೆ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜತೆಗೆ ಹಲವು ವಿಚಾರಗಳಲ್ಲಿ ಪ್ರಧಾನಿ ಮೋದಿ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, “ತರೂರ್ ಲಕ್ಷ್ಮಣ ರೇಖೆ” ಮೀರುತ್ತಿದ್ದಾರೆ ಎಂದು ಕಿಡಿಕಾರಿತ್ತು.