ಬೆಳಗಾವಿ: ಜಮ್ಮು ಕಾಶ್ಮಿರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ 26 ಜನ ಬಲಿಯಾಗಿದ್ದಾರೆ. ಕೆಲವು ಪ್ರವಾಸಿಗರನ್ನು ಮುಸ್ಲಿಂ ಯುವಕರು ರಕ್ಷಣೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ, ಗೋಕಾಕ್ ನಿವಾಸಿಯಾದ ಶಾನುಲ್ ಸೌದಾಗರ್ ಎಂಬಾತ ರಾಮನನ್ನು ರಕ್ಷಣೆ ಮಾಡಿದ ರಹಿಂ ಎಂದು ಪೋಸ್ಟರ್ ವೊಂದನ್ನು ಹರಿ ಬಿಟ್ಟಿದ್ದ.
ಅಲ್ಲದೇ, ರಾಜಕೀಯಕ್ಕಾಗಿ ಹಿಂದೂ -ಮುಸ್ಲಿಂರ ನಡುವೆ ದ್ವೇಷ ಮಾಡುವವರಿಗೆ ಈ ಪೋಸ್ಟ್ ಅರ್ಪಣೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆತನನ್ನು ಪಿಎಸ್ ಐ ಥಳಿಸಿದ್ದಾರೆಂದು ಆರೋಪಿಸಿದ್ದಾನೆ.
ಎಫ್ ಐ ಆರ್ ದಾಖಲಿಸದೆ, ನೋಟಿಸ್ ಕೊಡದೆ ನನ್ನನ್ನು ಪೊಲೀಸರು ಬಂಧಿಸಿದ್ದರು. ಎರಡು ದಿನ ಠಾಣೆಯಲ್ಲಿ ಇಟ್ಟುಕೊಂಡು ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಎಂಎಲ್ಸಿ ದಾಖಲು ಮಾಡಿದರೆ ರೌಡಿ ಶೀಟರ್ ಓಪನ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಅಲ್ಲದೇ, ಪೋಸ್ಟ್ ಮಾಡಿದ ಯುವಕ ಗೋಕಾಕ್ ನಗರದ ಪಿಎಸ್ಐ ವಾಲೀಕರ ವಿರುದ್ದ ಎಸ್ಪಿಗೆ ದೂರು ಸಲ್ಲಿಸಿದ್ದಾನೆ.