ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬೇಕೆಂದು ದೂರು ಸಲ್ಲಿಕೆಯಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಪೆಕ್ಸ್ ಬ್ಯಾಂಕ್ ನಲ್ಲಿ ಅನರ್ಹರಿಗೂ ಸಾಲ ನೀಡಿ ಎರಡು ಸಾವಿರ ಕೋಟಿ ರೂ. ನಷ್ಟವಾದ ಕುರಿತು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.
ಈ ಅಕ್ರಮದ ಹಿಂದೆ ಅಪೆಕ್ಸ್ ಬ್ಯಾಂಕ್ನ ಹಿಂದಿನ ಅಧ್ಯಕ್ಷ ಕೆ.ಎನ್. ರಾಜಣ್ಣ, ಎಂಡಿ ಸಿ.ಎನ್. ದೇವರಾಜ್ ಕೈವಾಡವಿರುವ ಆರೋಪವಿದೆ. ನಿವೃತ್ತಿ ಬಳಿಕವೂ ದೇವರಾಜ್ ಪುನಃ ಅಪೆಕ್ಸ್ ಬ್ಯಾಂಕ್ ಎಂಡಿ ಹುದ್ದೆಗೆ ಸಚಿವ ರಾಜಣ್ಣ ಶಿಫಾರಸಿನೊಂದಿಗೆ ನೇಮಕಗೊಂಡಿದ್ದರು. ಈ ಸಂಗತಿ ಗಮನಿಸಿದರೆ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ ಎಂದು ದಿನೇಶ್ 2023ರಲ್ಲೇ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು.
ಹೀಗಾಗಿ ದೇವರಾಜ್ ಹಾಗೂ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಪೂರ್ವಾನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ದಿನೇಶ್ ಕಲ್ಲಹಳ್ಳಿ ಅವರಿಗೆ ಲಿಖಿತ ಪತ್ರದ ಮೂಲಕ ಉತ್ತರ ನೀಡಿರುವ ರಾಜ್ಯಪಾಲರ ಕಚೇರಿ ‘ದೂರಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ರವಾನಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು 2023ರಲ್ಲೇ ಹೇಳಲಾಗಿತ್ತು. ಆದರೆ, ರಾಜ್ಯಪಾಲರ ಕಚೇರಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಕಳುಹಿಸಿ ಒಂದು ವರ್ಷ ಕಳೆದರೂ ಯಾವುದೇ ಕ್ರಮವಾಗಿಲ್ಲ. ಆದರೆ, ಸಚಿವರ ವಿರುದ್ಧದ ದೂರು ದಾಖಲಾತಿಗೆ ಪೂರ್ವಾನುಮತಿ ನೀಡುವ ಸಕ್ಷಮ ಪ್ರಾಧಿಕಾರ ರಾಜ್ಯಪಾಲರಾಗಿರುತ್ತಾರೆ. ಹೀಗಾಗಿ, ನಾನು ಸಲ್ಲಿಸಿದ ದೂರಿನ ಅಂತಿಮ ವಿಲೇವಾರಿ ಮಾಡಬೇಕು ಎಂದು ದಿನೇಶ್ ಸೆ. 18ರಂದು ಮತ್ತೊಮ್ಮೆ ಪತ್ರ ಬರೆದಿದ್ದಾರೆ.