ಬೆಂಗಳೂರು: ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದ್ದು, ಸಚಿವ ಎಚ್.ಸಿ. ಮಹಾದೇವಪ್ಪ ಸೇರಿದಂತೆ ಐವರ ವಿರುದ್ಧ ಲೋಕಾಯುಕ್ತಕ್ಕೆ ಆರ್ ಟಿಐ ಕಾರ್ಯಕರ್ತ ಪಿ.ಎಸ್. ಶ್ರೀನಾಥ್ ದೂರು ದಾಖಲಿಸಿದ್ದಾರೆ.
2020ರಿಂದ 2025ರ ವರೆಗೆ ಸುಮಾರು 100ರಿಂದ 150 ಕೋಟಿ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ.
ಸಚಿವ ಎಚ್.ಸಿ. ಮಹಾದೇವಪ್ಪ, ಇಲಾಖೆ ಆಯುಕ್ತ ಡಾ. ರಾಜೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಮೇಜರ್ ಮಣಿವಣ್ಣನ್, ಹಿಂದಿನ ಎಂಡಿ ನಟರಾಜ್, ಪ್ರಸ್ತುತ ಎಂಡಿ ಕೆ.ಎಂ. ವಸುಂಧರಾ ವಿರುದ್ಧ ದೂರು ದಾಖಲಾಗಿದೆ. ನಿಗಮದ ಹಣ ದುರ್ಬಳಕೆ ಹಾಗೂ ಭ್ರಷ್ಟಾಚಾರದ ಆರೋಪದಡಿ ದೂರು ದಾಖಲಾಗಿದೆ. ಸಚಿವರು, ಅಧಿಕಾರಿಗಳು ಶಾಮೀಲಾಗಿ ನಿಯಮ ಪಾಲಿಸದೆ ಹಣ ಬಿಡುಗಡೆ ಮಾಡಿರುವ ಆರೋಪ ಕೇಳಿ ಬಂದಿದೆ.
ಲೆಕ್ಕ ಪತ್ರ ವರದಿ ( ಆಡಿಟ್) ತಯಾರಿಸದೆ ಅಕ್ರಮ ನಡೆಸಿದ್ದಾರೆ. ನಿಗಮದ ಅನುದಾನ ಹಾಗೂ ಆದಾಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಪಿ.ಎಸ್. ಶ್ರೀನಾಥ್ ದೂರು ದಾಖಲಿಸಿದ್ದಾರೆ.
ತಮಗೆ ಬೇಕಾದ ಡೀಲರ್ಸ್ ಗಳಿಂದ ಹಣ ಪಡೆದು ಕಳಪೆ ಸಾಮಾಗ್ರಿ ಪೂರೈಕೆ ಮಾಡಿದ್ದಾರೆ. ಸರಬರಾಜು ಮಾಡಿದ್ದಕ್ಕಿಂತ ಹೆಚ್ಚುವರಿ ನಕಲಿ ಬಿಲ್ ಕ್ಲೈಂ ಮಾಡಿರುವ ಆರೋಪ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಬಿಲ್ ಗಳನ್ನು ನೀಡಿದ್ದು, ಆ ದಾಖಲೆಗಳನ್ನು ಸಂಗ್ರಹಿಸದೆ ನಾಶ ಮಾಡಿದ್ದಾರೆಂದು ಕೂಡ ಆರೋಪಿಸಿದ್ದಾರೆ. ಸೂರ್ಯ ಎಂಟರ್ಪ್ರೈಸ್ ಸಂಸ್ಥೆಗೆ ಕೆಲಸ ನೀಡಿ ಕೋಟಿಗಟ್ಟಲೇ ಹಣ ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.