ಉತ್ತರ ಪ್ರದೇಶ ಸರ್ಕಾರ ಗೋವುಗಳ ರಕ್ಷಣಾ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿರುವುದಾಗಿ ಘೋಷಿಸಿದೆ. ಶೀತಗಾಳಿಯ ಸಂದರ್ಭದಲ್ಲಿ ಅಂದಾಜು 12.35 ಲಕ್ಷ ನಿರ್ಗತಿಕ ಹಸುಗಳಿಗೆ ಆಶ್ರಯ ನೀಡಲು ಮುಂದಾಗಿದೆ. ಪ್ರಸ್ತುತ 7,696 ಗೋವುಗಳು ಶಿಬಿರಗಳಲ್ಲಿ ಆಶ್ರಯ ಪಡೆದಿವೆ ಎಂದು ತಿಳಿಸಿದೆ.
ಒಂದೇ ಒಂದು ಹಸುವೂ ಚಳಿಯಿಂದ ಸಾಯಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ(Yogi Adityanath) ಅವರು ಸೂಚನೆ ನೀಡಿರುವ ಬೆನ್ನಲ್ಲೇ, ರಾಜ್ಯದಾದ್ಯಂತ ಇರುವ ಆಶ್ರಯ ತಾಣಗಳಲ್ಲಿ ಟಾರ್ಪಾಲಿಯನ್, ವಾತಾವರಣವನ್ನು ಬೆಚ್ಚಗಿಡುವ ಸಾಧನಗಳು, ನೀರು, ಆಹಾರ ಸೇರಿದಂತೆ, ಅಗತ್ಯ ಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
‘ಸದ್ಯ, ರಾಜ್ಯದಾದ್ಯಂತ 12,35,700 ಹಸುಗಳು 7,696 ಆಶ್ರಯ ತಾಣಗಳಲ್ಲಿವೆ. ಅವುಗಳ ನಿರ್ವಹಣೆಯನ್ನು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳೂ 2025ರ ಫೆಬ್ರುವರಿ 25ರ ಒಳಗೆ ಪೂರ್ಣಗೊಳ್ಳಲಿವೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಿತ ಏಜೆನ್ಸಿಗಳಿಗೆ ನಿರ್ದೇಶನ ನೀಡಲಾಗಿದೆ. ಶೆಡ್ಗಳು, ಕುಡಿಯುವ ನೀರಿನ ಸೌಕರ್ಯಗಳನ್ನು ಗಟ್ಟಿಮುಟ್ಟಾಗಿ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಯಾವುದೇ ಗೋ ಶಿಬಿರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಅಥವಾ ಆ ಸಂಬಂಧ ದೂರುಗಳು ಬಂದರೆ ಕೂಡಲೇ ಕ್ರಮ ಕೈಗೊಳ್ಳುವುದನ್ನು ಸರ್ಕಾರ(Government) ಕಡ್ಡಾಯಗೊಳಿಸಿದೆ