ಧಾರವಾಡ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಡಿ. 8ಕ್ಕೆ ನಿಗದಿಪಡಿಸಲಾಗಿದೆ ಎಂದು ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮ ವರದಿಗಾರರೊಂದಿ ಮಾತನಾಡಿ ಬಸವರಾಜ ಹೊರಟ್ಟಿ, ಬೆಳಗಾವಿಯಲ್ಲಿ ನಡೆಯಲಿರುವ ಈ ಅಧಿವೇಶನದ ತಯಾರಿಗಾಗಿ ಮುಂದಿನ ವಾರ ಬೆಳಗಾವಿ ಡಿಸಿ ಜೊತೆ ಸಭೆ ನಡೆಸಲಾಗುತ್ತದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಅವರ ಸಮ್ಮತಿ ಪಡೆದಿದ್ದೇನೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಗಂಭೀರವಾಗಿಲ್ಲ. ದಕ್ಷಿಣ ಕರ್ನಾಟಕದ ಶಾಸಕರು ಮಾತ್ರ ಅಭಿವೃದ್ಧಿ ಕುರಿತು ಮಾತನಾಡುತ್ತಾರೆ. ಪ್ರತಿ ಬುಧವಾರ, ಗುರುವಾರ ಉತ್ತರ ಕರ್ನಾಟಕದ ಸಮ್ಯಸ್ಯೆಗಳ ಬಗ್ಗೆ ಮಾತನಾಡಲು ಪಿಕ್ಸ್ ಮಾಡಲಾಗಿದೆ. ಆದರೆ ಯಾವೊಬ್ಬ ಶಾಸಕರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಲ್ಲಿ ಶಾಸಕರಿಗೆ ಸರ್ಕ್ಯೂಲರ್ ಕಳುಹಿಸುತ್ತೇನೆ. ಈ ಬಾರಿ ಉತ್ತರ ಕರ್ನಾಟಕದ ಚರ್ಚೆಯಲ್ಲಿ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸಭಾಪತಿ, ಶಾಸಕರಿಗೆ ಬರಹದಲ್ಲಿ ಸೂಚನೆ ನೀಡಿ ನಂತರ ಮಾಧ್ಯಮಗಳಿಗೆ ಬಿಡುಗದೆ ಮಾಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯರಿಗೂ ಬರಹದಲ್ಲಿ ಸೂಚನೆ ನೀಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನವೆಂಬರ್ ಕ್ರಾಂತಿಯೋ, ಡಿಸೆಂಬರ್ ಕ್ರಾಂತಿಯೋ ಆಗಲಿ ಕ್ರಾಂತಿ ಮಾಡುವವರೂ ಮಾಡಿಸಿಕೊಳ್ಳುವವರೂ ಇದ್ದಾರೆ. ಕಣ್ಣಾರೆ ನೋಡಿಕೊಂಡು ಹೋಗುವುದು ಮಾತ್ರ ನಮ್ಮ ಕೆಲಸ. ಯಾಕೋ ಈ ನಡವಳಿಕೆಗಳು ಸರಿ ಅನಿಸುತ್ತಿಲ್ಲ. ದಿನನಿತ್ಯ ಮಾಧ್ಯಮಗಳಲ್ಲಿ ಗುರುತರ ಸಮಸ್ಯೆಗಳನ್ನು ಬಿಟ್ಟು ಕೇವಲ ವೈಯಕ್ತಿಕ ಚರ್ಚೆಗಳೇ ನಡೆಯುತ್ತಿವೆ, ಯಾರೇ ಆಗಲಿ ವಿನಾಕಾರಣ ಚರ್ಚೆ ಮಾಡಬಾರದು. ರಾಜ್ಯದ ಜನರ ಪರವಾಗೆ ಆಗಬೆಕಾದ ಕೆಲಸಗಳಿವೆ, ಅದರ ಬಗ್ಗೆ ಮಾತನಾಡಬೇಕು. ಸಭಾಪತಿಯಾಗಿ ಹೇಳುವುದು ನನ್ನ ಕರ್ತವ್ಯ ಎಂದಿದ್ದಾರೆ.
ಇನ್ನು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ ಪರಸ್ಪರ ನಿಂದನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮನುಷ್ಯತ್ವ ಇದ್ದವರು ಇಂತ ಮಾತಗಳನ್ನು ಮಾತನಾಡುತ್ತಾರಾ? ಶಾಸಕರಾದವರು ಮಾದರಿಯಾಗಬೇಕು. ಎನ್ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು. ಸಮಾಜದಲ್ಲಿ ಒಳ್ಳೆಯದನ್ನು ಮಾಡುವ ಒಂದು ಸೌಜನ್ಯ ಶಾಸಕರುಗಳಿಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


















