ಬೆಂಗಳೂರು: ಗೃಹಲಕ್ಷ್ಮೀ ಯೋಜನೆ (Gruha Lakshmi Scheme)ವಿಷಯವಾಗಿ ಸಿಎಂ ಸಿದ್ದರಾಮಯ್ಯ ಬಿಗ್ ಅಪ್ಡೇಟ್ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ಸ್ಥಗಿತ ಮಾಡುವುದಿಲ್ಲ. ನಮ್ಮ ಸರ್ಕಾರ ರಾಜ್ಯದಲ್ಲಿ ಇರುವವರೆಗೂ ಗೃಹಲಕ್ಷ್ಮೀಯ ಹಣ ಬಡವರ ಮನೆ ಸೇರುತ್ತಿರುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ಅವರು, ಗೃಹಲಕ್ಷ್ಮೀಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆ, ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಬಹಳಷ್ಟು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೆ. ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಂತಿದ್ದವು ಎಂದು ಬರೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೊವನ್ನು ನೋಡಿದೆ, ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೋಟಿ ಅವರು ಮನವಿ ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡಲ್ಲ, ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಈ ಮೂಲಕ ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತಿದ್ದೇನೆ ಎಂದು ರಾಜ್ಯದ ಜನರಿಗೆ ಹೇಳಿದ್ದಾರೆ.