ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ 7 ಲಕ್ಷ ರೂ. ವಂಚಿಸಿರುವ ಘಟನೆಯೊಂದು ನಡೆದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಎಂಬುವವರಿಗೆ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಕಿತ್ತಾಟ ನಡೆದಿತ್ತು. ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗಾಗಿ ಜಯಶ್ರೀ ಎಮ್ಮಿ ಹಾಗೂ ಶಾಸಕ ಹೆಚ್ವೈ ಮೇಟಿ ಅಳಿಯ ರಾಜ್ಕುಮಾರ್ ಮಧ್ಯೆ ಜಟಾಪಟಿ ನಡೆದಿತ್ತು. ಆ ವೇಳೆ ಒಂದು ದಿನ ಬೆಳಗ್ಗೆ ರಾಜ್ಕುಮಾರ್ ಯರಗಲ್ ಡಿಹೆಚ್ಓ ಕುರ್ಚಿಯಲ್ಲಿ ಕೂತಿದ್ದರು.
ತಮ್ಮ ಕುರ್ಚಿಯಲ್ಲಿ ಕೂತಿದ್ದ ರಾಜ್ಕುಮಾರ್ ಯರಗಲ್ ಅವರನ್ನು ಕಂಡಿದ್ದ ಜಯಶ್ರೀ ಕುರ್ಚಿ ಬಿಟ್ಟುಕೊಡುವಂತೆ ಹೇಳಿದ್ದರು. ಆದರೆ ರಾಜ್ಕುಮಾರ್ ಯರಗಲ್ ಕುರ್ಚಿ ಬಿಟ್ಟು ಕೊಟ್ಟಿರಲಿಲ್ಲ. ಬದಲಿಗೆ “ಇಂದಿನಿಂದ ನಾನೇ ಡಿಹೆಚ್ಓ ಸರ್ಕಾರದಿಂದ ಆದೇಶ ತಂದಿದ್ದೇನೆಂದು” ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ಜಯಶ್ರೀ ತಮ್ಮ ವರ್ಗಾವಣೆ ತಡೆಯಾಜ್ಞೆ ತರಲು ಹಿರಿಯ ಅಧಿಕಾರಿಗಳ ಭೇಟಿಗೆ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದ ವೇಳೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಆಪ್ತನೆಂದು ರಾಮಯ್ಯ ಎಂಬಾತ ಪರಿಚಯನಾಗಿದ್ದಾನೆ. ರಾಮಯ್ಯ ತಾನು ಕೆಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.
ಹೀಗಾಗಿ ಜಯಶ್ರೀ ಆತನಿಗೆ ನಡೆದ ಸಂಗತಿ ಹೇಳಿದ್ದಾಳೆ. ನಂತರ ರಾಮಯ್ಯ ನಾನು ಸಮಸ್ಯೆ ಬಗೆ ಹರಿಸುತ್ತೇನೆ 50 ಸಾವಿರ ರೂ. ನೀಡಿ ವಿವಾದ ಸರಿಪಡಿಸುವುದಾಗಿ ಹೇಳಿದ್ದಾನೆ. ನಂತರ ಹಂತ ಹಂತವಾಗಿ 7 ಲಕ್ಷ ರೂ. ಹಣ ರಾಮಯ್ಯ ಪಡೆದಿದ್ದಾನೆ ಎನ್ನಲಾಗಿದೆ.
ಹಣ ಪಡೆದ ನಂತರ ಜಯಶ್ರೀ ಅವರ ಸಂಪರ್ಕಕ್ಕೆ ಬಾರದೆ ತಲೆಮರೆಸಿಕೊಂಡಿದ್ದಾನೆ ಎಂದು ಜಯಶ್ರೀ ವಂಚನೆ ಬಗ್ಗೆ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.